22/5/15

ಸಾಸಿವೆ ತಂದವನು .....

ನಾನು ಆಫೀಸಿನಲ್ಲಿ ಬ್ಯುಸಿ ಆಗಿದ್ದಾಗ ನನ್ನ ಫೋನ್ ರಿಂಗಣಿಸಿತು . ಮಾಡುತ್ತಿದ್ದ ಕೆಲಸವನ್ನು ಅರ್ಧಕ್ಕೇ ಬಿಟ್ಟು ತಕ್ಷಣವೇ ಆಸ್ಪತ್ರೆಗೆ ಓಡಿ ಬಂದೆ . ನೀನೆಂದೂ ಆಸ್ಪತ್ರೆಯ ಕಡೆಗೆ ಮುಖ ಮಾಡಿದವಳೇ ಅಲ್ಲ ಅಮ್ಮ !. ICU ಕೋಣೆಯೊಳಗೆ ಇಣುಕಿ ನೋಡಿದೆ ,ನನ್ನೆಡೆಗೆ ಒಂದು ಕ್ಷೀಣ ನಗು ........ ನಾನು ಮತ್ತೆ ಮಗುವಾಗಿ ಹೋದೆ  ಅಮ್ಮ ,ಗಳ ಗಳನೆ ಅತ್ತು ಬಿಟ್ಟೆ . ಐದಾರು  ವೈದ್ಯರ ತಂಡ ನಿನ್ನ ಕೇಸ್  ಬಗ್ಗೆ ಮಾತನಾಡುತ್ತಿದ್ದರು . ನಿನ್ನ ಖಾಯಿಲೆಗೆ ಉದ್ದುದ್ದ ಹೆಸರು ,ನನಗೆ ಅದ್ಯಾವುದೂ ಬೇಡ ,ನೀನು ಬೇಕು ,ಬರಿ ನೀನು ......
ಒಂದು ಗಡ್ಡೆ ನಿನ್ನ ಮಿದುಳಿನ ತುಂಬಾ ಹರಡಿ ನಿಂತಿತ್ತು . ಒಂದಲ್ಲ ಎರಡು ಅಲ್ಲಲ್ಲ ಮೂರು ...... ತೀವ್ರ ಪರೀಕ್ಷೆಯ ನಂತರ ಗೊತ್ತಾಗ ತೊಡಗಿತ್ತು . ಕೆಲವೇ  ದಿನಗಳಲ್ಲಿ ಆಪರೇಷನ್ ಮಾಡಬೇಕಾಗಿತ್ತು . ನನ್ನೆಲ್ಲಾ ಉಳಿತಾಯ ,ಇನ್ಸೂರೆನ್ಸ್ ಎಲ್ಲ ಹಣವನ್ನು ಒಟ್ಟುಗೂಡಿಸಿ ಕೊಟ್ಟದ್ದಾಯಿತು . ನಿನ್ನ ಮೇಲೆ ಒಂದಲ್ಲ ,ಎರಡಲ್ಲ  ಏಳು ಮೇಜರ್ ಆಪರೇಷನ್ ಆದವು . ಆ ನಿನ್ನ ಪುಟ್ಟ ದೇಹ ಅದನ್ನು  ತಡೆದುಕೊಂಡಿದ್ದಾದರು ಹೇಗೆ ?. ಆ ಕೆಲವಾರು ತಿಂಗಳು ನಾನು ಹೇಗೆ ಬದುಕಿದ್ದೆನೊ ಗೊತ್ತಿಲ್ಲ ,ಅಥವಾ ಜೀವಂತ ಶವವಾಗಿದ್ದೆ .ಆಧ್ಯಾತ್ಮದ ಕಡೆಗೆ ವಾಲತೊಡಗಿದ್ದೆ. 
ಆ ಒಂದು ರಾತ್ರಿ ಮಾತ್ರ ನನ್ನ ಜೀವನದಲ್ಲಿ ಮರೆಯದೆ ಉಳಿದು ಬಿಟ್ಟಿದೆ . ಮತ್ತೆ ನಿನ್ನ ICU ಗೆ ಶಿಫ್ಟ್ ಮಾಡಿದ್ದರು . ಜೀವನ್ಮರಣದ ಹೋರಾಟದಲ್ಲಿ ಇದ್ದೆ ನೀನು . ಆ ಗಾಬರಿಯ ಓಡಾಟ , ಆ ಔಷಧಿಯ ಬಾಟಲಿಗಳು ...... ಸತತ ಎಂಟು ತಾಸುಗಳ ಹೋರಾಟಕ್ಕೆ ಜಯ ದೊರೆತಿತ್ತು . ಕೊನೆಗೂ ನೀನು ಬಂದೆ , ಸಾವಿನೀಚೆಗೆ ಕಾಲಿಟ್ಟು ಒಳ ಬಂದೆ . 
ಈಗ ವಾರ್ಡ್ಗೆ ಶಿಫ್ಟ್ ಮಾಡಿದ್ದರು ನಿನ್ನ . ಕಿಮೋಥೆರಪಿ ಶುರುವಾಗಿತ್ತು . ಮಾರುದ್ದ ಮಲ್ಲಿಗೆ ಮುಡಿಯುತ್ತಿದ್ದ ನಿನ್ನ ಕೂದಲು ಮಾಯವಾಗಿತ್ತು . ನಿನ್ನ ದೇಹ ಮುಂಚಿನ ಅರ್ಧದಷ್ಟು ಆಗಿಹೋಗಿತ್ತು . ಆದರು ನೀನೆ ಗೆದ್ದುಬಿಟ್ಟೆ . ಕದ ತಟ್ಟಿ ಒಳಗೆ ಬರಲೇ ? ಎಂದು ಕೇಳಿದ ಸಾವನ್ನು ನನಗೆ ಕೆಲಸವಿದೆ ಹೋಗು ಎಂದು ಒದ್ದೋಡಿಸಿದ್ದೆ . 
ಆದರೂ ಮನೆಯಲ್ಲಿ ನಿನ್ನ ನಗುವಿಲ್ಲ , ಗೆಜ್ಜೆಯ  ದನಿಯಿಲ್ಲ . ನಿನ್ನ ಇರವನ್ನು ತೋರಿಸುತ್ತಿದ್ದದ್ದು ಎಲೆಕ್ಟ್ರಾನಿಕ್ಸ್ ಉಪಕರಣಗಳ 'ಬ್ಲಿಪ್ ' ಶಬ್ದ ಮಾತ್ರ . ಕೊನೆಗೂ ಚಿಕೆತ್ಸೆ ಮುಗಿದಿತ್ತು . ನಿನ್ನ ಮಿದುಳಿಗೆ ಕೆಲವು ಕಡೆ ಗಾಯವಾಗಿ ಹೋಗಿತ್ತು . ನೀ ನನ್ನ ಸಾಕಿದಂತೆ ನಾ ನಿನ್ನ ಸಾಕಬೇಕಿತ್ತು . ನೀನು ನೂರಕ್ಕೆ ನೂರರಷ್ಟು ನನ್ನ ಮೇಲೆ ಅವಲಂಬಿ . 
ಅಡಿಗೆ ಮನೆಗೆ ಕಾಲೇ ಇಟ್ಟಿರದ ನಾನು ಅಡಿಗೆ ಮಾಡುವುದು ಕಲಿತೆ . ದೀಪಾವಳಿಯಂದು ನಾನು ಮಾಡಿದ ಹೋಳಿಗೆ ತಂದಿಟ್ಟಾಗ ನಿನ್ನ ಕಣ್ಣಂಚಲ್ಲಿ ನೀರು ಬಂದಿತ್ತು . ಮನೆಯಲ್ಲಿ ಸ್ಮಶಾನ ಮೌನ ನನಗೆ ಅಸಹನೀಯ ಆಗತೊಡಗಿತ್ತು . 
ನಿನ್ನ ಕೈಗೆ ಪೆನ್ನು ಕೊಟ್ಟು ಬರಿ ,ಬರಿ ಎಂದು ಹೇಳುವೆ . ನೀನು  ಗೀಚಿದ ಗೆರೆಗಳಲ್ಲಿ ನನ್ನದು ಅಕ್ಷರ ಹುಡುಕುವ ಸಾಹಸ ...... 
ನಿನ್ನ ಮ್.. ಮ್ ಶಬ್ದದಲ್ಲಿ ನನ್ನ ಹೆಸರು ಕೆಳುತ್ತಿದೆಯೇ ಎಂದು ನೋಡುತ್ತಿದೇನೆ. 
ಅದೆಷ್ಟೋ ದೀಪಾವಳಿ ,ಸಂಕ್ರಾಂತಿಗಳು ಕಳೆದು ಹೋಗುತ್ತಿದೆ ..................... 
*********************************************************************************
ಹದಿನೈದು ವಸಂತಗಳು ಕಳೆದು ಹೋಗಿದೆ . ಆದರೆ ವಿಶುವಿನ ನಿಷ್ಠೆ ಮಾತ್ರ ಕಡಿಮೆ ಆಗಿಲ್ಲ . ಬಹುಶಃ ಕಡಿಮೆಯೂ ಆಗುವುದಿಲ್ಲ . ಸಾವಿರದ ಮನೆಯಿಂದ ಸಾಸಿವೆ ತರುವ ಪ್ರಯತ್ನದಲ್ಲಿದ್ದಾನೆ ..................