10/8/16

ಖಾರಾಬಾತು - 6 ( ಶ್ರೀ ಟಾಕೀಸು )

ಒಂದರ್ಥದಲ್ಲಿ ಸಿನಿಮಾ ಎನ್ನುವುದು ಪಬ್ಲಿಕ್ ಪ್ರಾಪರ್ಟಿ . ಅದನ್ನು ನಾವು ಪಬ್ಲಿಕ್ ನ ಒಂದು ಭಾಗವಾಗಿ ನೋಡಿದಾಗ ಮಾತ್ರ ಸಿನಿಮಾ ನಮ್ಮದೇ ಆಗುತ್ತದೆ . ಇದೇ ಕಾರಣಕ್ಕೇ ಇನ್ನೂ ನಮ್ಮ ಬೆಡ್ ರೂಮಿನ ಬಾಗಿಲಲ್ಲಿ ರಾಜ್ಕುಮಾರ್ , ವಿಷ್ಣುವರ್ಧನ್ , ಅಮಿತಾಬ್ ರ ಫೋಟೋಗಳು ರಾರಾಜಿಸುತ್ತಿವೆ . ಮೊನ್ನೆ ಮೊನ್ನೆಯಷ್ಟೇ 'ಟೊರ್ರೆನ್ಟ್' ನಿಷೇಧವಾಯಿತು . ಸ್ವಲ್ಪ ದಿನಕ್ಕೆ ಮತ್ತೊಂದು ಹೆಸರಿಟ್ಟುಕೊಂಡು ಬಂದರೂ ಆಶ್ಚರ್ಯವಿಲ್ಲ . ಇತ್ತಿಚೀಗೆ ಸಿನಿಮಾ ಎನ್ನುವುದು ದೊಡ್ಡ ಸಂಗತಿಯೇ ಅಲ್ಲ , ಗಂಟೆಗಳೊಳಗೆ ಇಂಟರ್ನೆಟ್ ನಿಂದ ಇಳಿಸಿಕೊಂಡು ನೋಡಿ ಡಿಲೀಟ್ ಮಾಡುತ್ತೇವೆ . ಹೀಗೆಯೇ ಒಂದು ಹತ್ತು-ಹದಿನೈದು ವರ್ಷ ಹಿಂದೆ ಹೋಗೋಣ . ಮನೆಗೊಂದು ದೈತ್ಯಾಕಾರದ ಟಿವಿ ಅಷ್ಟೇ ಇದ್ದ ಕಾಲ . ಆ ಟಿವಿ ಎಷ್ಟೋ ವರ್ಷಗಳ ವಿಕಸನ ಹೊಂದಿ ಕಲರ್ ಕಾಣುವಷ್ಟು ಮುಂದುವರೆದಿತ್ತು . ಬ್ಲಾಕ್ ಅಂಡ್ ವೈಟ್ ಪರ್ವ ಮುಗಿದಿತ್ತು .  ಕನ್ನಡದ ಒಂದೋ ಎರಡೋ ಚಾನೆಲ್ ಬರುತಿತ್ತು . ದೂರದರ್ಶನದಲ್ಲಿ ಬರುತ್ತಿದ್ದ ರಾಮಾಯಣ ಹಾಗೂ ಮಹಾಭಾರತ ಎಲ್ಲರ ಹಾಟ್ ಫೇವರಿಟ್ . ಊರಿಗೆ ಊರೇ ಒಂದು ಕಡೆ ಜಮೆಯಾಗಿ ಟಿವಿ ನೋಡುತಿತ್ತು . ಇಂತಿಪ್ಪ ಕಾಲದಲ್ಲಿ ಸಾಗರದಲ್ಲಿ 'ಶ್ರೀ' ಎಂಬ ಟಾಕೀಸ್ ಇತ್ತು , ಈಗಲೂ ಇದೆ . ಮೊದಲಿಗೆ ಕೃಷ್ಣ , ಸಾಗರ್ ಎಂಬೆಲ್ಲಾ ಟಾಕೀಸ್ ಇದ್ದರೂ ನಡೆಸಲು ಆಗದೆ ಮುಚ್ಚಿದ್ದಾರೆ . ಈಗಲೂ ಆ ಕಟ್ಟಡಗಳು ಗತ ಕಾಲದ ವೈಭವ ಸಾರುತ್ತಾ ಹಾಗೆಯೇ ನಿಂತಿವೆ .
" ಕೃಷ್ಣಾ ಟಾಕೀಸ್ ಅಲ್ಲಿ ಯಾವ ಸಿನಿಮಾ ಓಡ್ತಾ ಇದೆ ? ಜೇಡರಬಲೆ , ಹ ಹ ಹ " ಎಂದು ಜೇಡರಬಲೆ ಕಟ್ಟಿದ ಕೃಷ್ಣಾ  ಟಾಕೀಸನ್ನು ಜನರು ಆಡಿಕೊಳ್ಳುತ್ತಿದ್ದರು . ನನಗೆ ಬುದ್ಧಿ ಬಂದ  ಕಾಲದಿಂದ ಸಾಗರದಲ್ಲಿ ಇದ್ದದ್ದು ಎರಡೇ ಟಾಕೀಸು 'ಶ್ರೀ' ಹಾಗೂ 'ಸಾಗರ್' . ಹೆಚ್ಚಾಗಿ ಹಾಕುತ್ತಿದ್ದದ್ದು ಕನ್ನಡ ಸಿನಿಮಾಗಳನ್ನು . ಯಾವುದೊ ಬಹಳ ಸುದ್ದಿ ಮಾಡಿದ ಅಥವಾ ಸ್ಟಾರ್ ನಟರ ಕೆಲವು ಪರಭಾಷಾ ಸಿನಿಮಾಗಳನ್ನು ಹಾಕುತ್ತಿದ್ದರು , ಅದೂ ಬೆಳಗಿನ ಒಂದು ಶೋ ಮಾತ್ರ . ಉಳಿದಂತೆ ನಾನು ಪೋಸ್ಟರ್ ನೋಡುತ್ತಿದ್ದದ್ದು ಕೇವಲ ಕನ್ನಡ ಮತ್ತು ಕನ್ನಡ ಸಿನಿಮಾ ಮಾತ್ರ . ಈ ಎರಡೂ ಟಾಕೀಸುಗಳು ನಾನು ಶಾಲೆಗೆ ಹೋಗುವ ರಸ್ತೆಯಲ್ಲೇ ಇದ್ದರಿಂದ ಪ್ರತಿ ದಿನ ಯಾವ ಸಿನಿಮಾ ಇದೆ ಎಂದು ಇಣುಕಿ ನೋಡದೆ ಹೋಗುತ್ತಿರಲಿಲ್ಲ . ಹೀಗೆ ಪ್ರತಿ ದಿನ ನೋಡಿ ಇಷ್ಟವಾದ ಸಿನಿಮಾದ ಸುದ್ದಿ ತಂದು ಮನೆಗೆ ಅರುಹುತ್ತಿದ್ದೆ . ಸಾಗರದಿಂದ ಹದಿನಾರು ಕಿಲೋಮೀಟರು ಇರುವ ನನ್ನೂರಿನಿಂದ ಅಪ್ಪ ಅಮ್ಮ ಇಲ್ಲದೆ ಸಿನಿಮಾ ನೋಡಲು ಸಾಧ್ಯವಿರಲಿಲ್ಲ , ಮನೆಯಲ್ಲಿ ಒಪ್ಪಿಗೆಯೂ ಸಿಗುತ್ತಿರಲಿಲ್ಲ . ಆದ್ದರಿಂದಲೇ ಒಳ್ಳೆಯ ಸಿನಿಮಾಗಳು ಬಂದಾಗ ಒಂದಕ್ಕೆ ಎರಡು ಸೇರಿಸಿ ಆ ಸಿನಿಮಾ ಹೊಗಳಿ , ಮನೆಯಲ್ಲಿ ಪೂಸಿ ಹೊಡೆದು ಸಿನೆಮಾಗೆ ಹೊರಡಿಸುತ್ತಿದ್ದೆ .
ಎಂಜಿನಿಯರಿಂಗ್ ಪದವಿ ಪಡೆದು , ಸಿನಿಮಾ ಪ್ರೊಜೆಕ್ಷನ್ ಕಲೆಯ ಹಿಂದಿನ ಮರ್ಮ ಅರ್ಥ ಮಾಡಿಕೊಂಡಿದ್ದರೂ ಇಂದಿಗೂ ನನಗೆ ಇದೊಂದು ಪವಾಡವಾಗಿ ಕಾಣುತ್ತದೆ . ಟಿಕೆಟು ಹರಿದು ನಮ್ಮನ್ನು ಬೇರೊಂದು ಪ್ರಪಂಚಕ್ಕೆ ಕರೆದೊಯ್ದು ಬಿಡುವ ಟಾಕೀಸಿನ ಗೇಟ್ ಕೀಪರ್ ,ಸಿಬ್ಬಂದಿಗಳು ಎಲ್ಲರನ್ನೂ ನಾನು ಬೆರಗುಗಣ್ಣಿನಿಂದ ನೋಡುತ್ತೇನೆ . ನಾನು ಮೊದಲು ನೋಡಿದ ಸಿನಿಮಾ 'ಸೂರ್ಯವಂಶ ' . ವಿಷ್ಣುವರ್ಧನ್ ಕಟ್ಟಾ ಅಭಿಮಾನಿಯಾದ ನನಗೆ ಅವರನ್ನು ಮೊದಲಬಾರಿಗೆ ಅಷ್ಟು ಹತ್ತಿರದಿಂದ ನೋಡಿ ಖುಷಿಯೋ ಖುಷಿ . ಅವರು ಟಾಕೀಸಿನ ಹಿಂದೆ ಎಲ್ಲೋ ಇದ್ದಾರೆ ಎಂದು ನನಗನ್ನಿಸುತಿತ್ತು . ಆ ಜನ , ಸಿಳ್ಳೆ , ಚಪ್ಪಾಳೆ , ನಾನಂತೂ ರೋಮಾಂಚಿತನಾಗಿ ಹೋದೆ . ಅವತ್ತು ರಾತ್ರಿ ನನ್ನ ಕನಸಿನಲ್ಲಿ ವಿಷ್ಣುವರ್ಧನ್ ಬರದಿದ್ದರೆ ಕೇಳಿ . ಒಂದು ಸಿನಿಮಾ ನೋಡಿದ್ದು ನನಗೆ ಒಂದು ಚಿಪ್ಸ್ ತಿಂದ ಹಾಗೆ ಆಗಿತ್ತು . ಪ್ರತಿ ಬಾರಿ ಟಾಕೀಸಿನ ಮುಂದೆ ಹಾದು ಹೋಗುವಾಗ ಒಂದು ಪವಿತ್ರ ಭಾವನೆ ನನ್ನ ಮನಸ್ಸಿನಲ್ಲಿ ಮೂಡುತಿತ್ತು .
ವರುಷಗಳು ಉರುಳಿದಂತೆ ನಾನು ಒಬ್ಬನೇ ಸಿನಿಮಾ ನೋಡುವ ಧೈರ್ಯವೂ ಬಂದಿತು . ಜೊತೆಗೆ ಸಿನಿಮಾದಲ್ಲಿ ಅದು ಸರಿ ಇಲ್ಲ , ಇದು ಸರಿ ಇಲ್ಲ ಎಂದು ಬೊಟ್ಟು ಮಾಡುವ ಜಾಣ್ಮೆಯೂ ಬಂದಿತ್ತು . ಅಷ್ಟರಲ್ಲಾಗಲೇ ನಾನು ಅಮೃತಧಾರೆ , ಜೋಗಿ , ಆಪ್ತಮಿತ್ರ ಹೀಗೆ ಲೆಕ್ಕವಿಲ್ಲದಷ್ಟು ಸಿನಿಮಾಗಳನ್ನು ಟಾಕೀಸಿನಲ್ಲಿ ನೋಡಿದ್ದೆ .  ಮನೆಯಲ್ಲಿ ಹೀಗೆಯೇ ಪೂಸಿ ಹೊಡೆದು ಜೋಗಿ ಸಿನೆಮಾ ನೋಡಲು ಅಪ್ಪ ಅಮ್ಮನ ಜೊತೆ ಬಂದಿದ್ದೆ . ಆದರೆ ಅಂದು ಟಾಕೀಸು ಖಾಲಿ ಇತ್ತು , ಹತ್ತಿಪತ್ತು ಪ್ರೇಕ್ಷಕರು ಇದ್ದರೇನೋ ? . ಟಾಕೀಸಿನ ಕತ್ತಲೆಯೊಳಗೆ ಕಾಲಿಟ್ಟಾಯ್ತು . ಸೋಪು , ಶಾಂಪೂ , ಸರ್ಕಾರದ ಒಂದಷ್ಟು ಜಾಹೀರಾತುಗಳು , ಹೊಸ ಸಿನೆಮಾದ ಟ್ರೇಲರ್ ಎಲ್ಲವೂ ಒಂದರ ಹಿಂದೆ ಒಂದರಂತೆ ಬಂದು ಹೋಯ್ತು . ತಕ್ಷಣ ಮತ್ತೆ ಕತ್ತಲು ಆವರಿಸಿ ಸೆನ್ಸಾರ್ ಸರ್ಟಿಫಿಕೇಟ್ ತೆರೆಯ ಮೇಲೆ ಬಂದಿತು . ಸ್ವಲ್ಪ ತಿಳಿದವರು " ಒಹ್ , ಅಷ್ಟ್ ರೀಲ್ ಇದೆ ಇಷ್ಟ್ ಹೊತ್ತು ಆಗುತ್ತೆ " ಎಂದೆಲ್ಲಾ ಗುಸು ಗುಸು ಶುರುವಾಯಿತು . ಎಲ್ಲಾ ಸಿನೆಮಾದಂತೆಯೇ ಮೊದಲು ದೇವರನ್ನೇ ತೋರಿಸಿದರು , ದೇವರ ಮೂರ್ತಿ ಅದಕ್ಕೆ ಪೂಜೆ ಮಾಡಿ ಹಿಂದೆ ಒಂದು ಶ್ಲೋಕ ಹಾಕಿ ಪ್ರೊಡಕ್ಷನ್ ಹೌಸ್ ನ ಹೆಸರು ಎರಡು ಬಾರಿ ಗಾಳಿಯಲ್ಲಿ ತಿರುಗಿ ಬಂದಿತು . ಕೆಲವು ಬ್ಯಾನರ್ ಗಳು ತೆರೆಯ ಮೇಲೆ ಬಂದರೆ ಜನರು ಪುಳಕಿತಗೊಳ್ಳುತ್ತಾರೆ . ಹಿಂದಿಯ ಯಶ್ ರಾಜ್ ಬ್ಯಾನರ್ , ಹುಡುಗಿ ಬಣ್ಣದ ರಂಗೋಲಿ ಚೆಲ್ಲುವ ಯು ಟಿವಿ ಬ್ಯಾನರ್ . ಇಂಗ್ಲೀಷಿನ ಎಂ.ಜಿ.ಎಂ ನ ಸಿಂಹ , ಡಬ್ಲ್ಯೂ ಬಿ , ಡಿಸ್ನಿಯವರ ಕೋಟೆ . ಕನ್ನಡದ ವಜ್ರೇಶ್ವರಿ ಕಂಬೈನ್ಸ್ , ವೀರಸ್ವಾಮಿ , ರಾಕ್ ಲೈನ್ ಪ್ರೊಡಕ್ಷನ್ಸ್ . ಬಹುಶಃ ಕೊಟ್ಟ ಕಾಸಿಗೆ ಮೋಸವಿಲ್ಲ ಎಂಬ ಭರವಸೆ ಇರಬಹುದು . ನಂತರ ಟೈಟಲ್ ಕಾರ್ಡ್ ಬರುತ್ತಿತ್ತು . ಸಿನಿಮಾ ಮಾಡುವುದಕ್ಕಿಂತ ಟೈಟಲ್ ಹೇಗೆ ತೋರಿಸಬೇಕು ಎಂದೇ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವ ನಿರ್ದೇಶಕರಿದ್ದಾರೆ . ರವಿಚಂದ್ರನ್ ಸಹ ಇದರಲ್ಲಿ ಒಬ್ಬರೇನೋ . ಇದಕ್ಕೆ ಕೊಡುವ ಹಿನ್ನಲೆ ಸಂಗೀತವೂ ಅಂತಾದ್ದೇ . ಕೆಲವರು ಅದಕ್ಕೆಂದೇ ಸಂಗೀತ ಕಂಪೋಸ್ ಮಾಡಿದರೆ , ಮತ್ತೊಬ್ಬರು ಸಿನಿಮಾದ ಹಾಡನ್ನೇ ಬಳಸಿಕೊಳ್ಳುತ್ತಾರೆ . ಟೈಟಲ್ ಗೆ ಕೊಟ್ಟ ಮ್ಯೂಸಿಕ್ ಸಿನಿಮಾದ ಅಲ್ಲಲ್ಲಿ ಬರುವುದೂ ಸಹ ಉಂಟು . ಗಾಳಿಪಟ ಸಿನಿಮಾದಲ್ಲಿ ಗಣೇಶ್ ಹಾಗೂ ಸ್ನೇಹಿತರ ತರಲೆ ಮಾತುಗಳನ್ನೇ ಹಿನ್ನಲೆಗೆ ಬಳಸಿಕೊಂಡಿದ್ದಾರೆ . ಈಗೀಗ ಕೆಲವರು ಒಂದೆರಡು ಸೀನು ಆದ ಮೇಲೂ ಟೈಟಲ್ ಕಾರ್ಡ್ ತೋರಿಸುತ್ತಾರೆ . ನಂತರ ಒಂದೊಂದೇ ತಂತ್ರಜ್ಞರ ಹೆಸರು ಬಂದು ಕೊನೆಯಲ್ಲಿ ಸಂಗೀತ ತಾರಕಕ್ಕೆ ಏರಿ ನಿರ್ದೇಶಕ , ಪ್ರೊಡ್ಯೂಸರ್ , ಹೀರೋ ಹಾಗೂ ಅವರ ಬಿರುದುಗಳು ಕನ್ನಡ ಹಾಗೂ ಇಂಗ್ಲೀಷು ಎರಡರಲ್ಲೂ ಬಂದ ಮೇಲೆಯೇ ನಿಜವಾದ ಸಿನಿಮಾ ಶುರು . ಆದರೂ ಇವೆಲ್ಲವನ್ನೂ ನೋಡಲೇಬೇಕು ಆಗಲೇ ಸಂತೃಪ್ತಿ . ಬಸ್ಸು ತಪ್ಪಿಸಿಕೊಂಡು ಲೇಟಾಗಿ ಬಂದು ಕತ್ತಲಲ್ಲಿ ಸಿಕ್ಕ ಸಿಕ್ಕವರ ಕಾಲು ಮೆಟ್ಟಿ ಒಳ ಬಂದ ಪ್ರೇಕ್ಷಕ ಮೊದಲು ಕೇಳುವುದೇ " ಟೈಟಲ್ ತೋರ್ಸಿ ಆಯ್ತಾ ? " ಆಗಿಲ್ಲವೆಂದಾದರೆ ತೃಪ್ತಿ , ಆಗಿದೆ ಎಂದಾದರೆ ಏನೋ ಕಳೆದುಕೊಂಡ ದುಗುಡ . ಬಾಂಡ್ ಸಿನಿಮಾಗಳನ್ನು ನೋಡುವ ಮೊದಲು  ಆ ಹಿನ್ನಲೆ ಸಂಗೀತದೊಂದಿಗೆ ಅನಿಮೇಟೆಡ್ ಸೀಕ್ವೆನ್ಸ್ ನೋಡದಿದ್ದರೆ ಹೀಗೆ . ಚಿತ್ರರಂಗದಲ್ಲಿ ಈ ರೀತಿ ಹೆಸರು ಹಾಕಿಸಿಕೊಳ್ಳಲು ದೊಡ್ಡ ಲಾಬಿಯೇ ನಡೆಯುತ್ತದೆ . ಈಗೀಗ ಹಾಲಿವುಡ್ ಪ್ರಭಾವದಿಂದ ಹೆಸರುಗಳನ್ನು ಸಿನಿಮಾ ಮುಗಿದ ಮೇಲೆ ಹಾಕುವುದುಂಟು . ನಮ್ಮೂರಿಗೆ ಇದ್ದ ಕೊನೆಯ ಬಸ್ಸು ರಾತ್ರಿ ಎಂಟು ಗಂಟೆಗೆ , ಅದನ್ನು ಹಿಡಿಯುವ ಭರದಲ್ಲಿ ಯಾರೂ ಈ ಹೆಸರುಗಳನ್ನು ಕುಳಿತು ಓದುವುದಿಲ್ಲ .  ಕೆಲವೊಮ್ಮೆ ಸಿನಿಮಾದ ಎಂಡಿಂಗ್ ಊಹೆಗೆ ತಕ್ಕಂತೆ ಇದ್ದರೆ , ಉದಾಹರಣೆಗೆ ಸಮ್ಮಿಲನ , ಫೈಟ್ , ಹೀರೋ ಜಯ ಹೀಗೆ , ಅದನ್ನೂ ಸಹ ಬಿಟ್ಟು ಬಸ್ಸಿಗೆ ಓಡುತ್ತಾರೆ . ಮತ್ತೆ ಟಾಕೀಸಿನ ಒಳಗೆ ಕತ್ತಲು ಆವರಿಸುತ್ತದೆ .
ಆದರೆ ಪ್ರೇಕ್ಷಕರು ಇಲ್ಲದೆ ನೋಡಿದ ಜೋಗಿ ಸಿನಿಮಾ ಕಿಕ್ ನೀಡಲೇ ಇಲ್ಲ . ಪಬ್ಲಿಕ್ ನ ಭಾಗವಾಗಿ ನೋಡಿದಾಗ ಮಾತ್ರ ಸಿನಿಮಾ ನಮ್ಮದೇ ಆಗುತ್ತದೆ . ಮಿಣುಕು ಲ್ಯಾಪ್ಟಾಪ್ ಹಿಡಿದು ಕುರೋಸಾವ ಸಿನಿಮಾ ನೋಡಿ ವಿಮರ್ಶೆ ಬರೆಯುವ ಜಾಣ ವಿಮರ್ಶಕರು ಇದನ್ನು ಅರಿತುಕೊಳ್ಳಬೇಕು . ಸಿನಿಮಾ ಬೇರೆ ಪುಸ್ತಕ ಬೇರೆ . ಪುಸ್ತಕ ನಮ್ಮನ್ನು ಒಳಗೆ ಎಳೆದುಕೊಂಡು ಏಕಾಂತ ಸೃಷ್ಟಿಸುತ್ತದೆ . ಸಿನಿಮಾ ಒಂದು ಸಮುದಾಯ ಕಲೆ .

5/8/16

ವಿಕಾಸ'ವಾದ' -೨ ( ಲಿಟಲ್ ಆಲ್ಬರ್ಟ್ )

ಇಪ್ಪತ್ತನೇ ಶತಮಾನದ ಆದಿಕಾಲ, ವೈದ್ಯವಿಜ್ಞಾನ ಇನ್ನೂ ತೊಟ್ಟಿಲಲ್ಲಿತ್ತು. ಮನೋವಿಜ್ಞಾನವಂತೂ ಶಿಶು. ಹುಚ್ಚುಹಿಡಿದವರನ್ನು ಚರ್ಚಿಗೆ ಸೇರಿಸಲಾಗುತ್ತಿತ್ತು. ಅಲ್ಲಿ ಜನರಿಗೆ ಬೈಬಲ್ ಓದಿ ಹೇಳುತ್ತಾ "ಭಗವಂತಾ ಕರುಣೆ ತೋರು" ಎಂದು ಬೇಡಿಕೊಳ್ಳಲಾಗುತ್ತಿತ್ತು. ಆಗಿನ ಕಾಲಕ್ಕೆ ನಮಗೆ ತಿಳಿದಿದ್ದ ಮನೋವಿಜ್ಞಾನ ಅಷ್ಟೇ!!
             ನಂತರದ ದಿನಗಳಲ್ಲಿ ಬಂದ ಪಾವ್ ಲೋವ್ ಎಂಬ ವಿಜ್ಞಾನಿ 'Pavlovian conditioning' ಅಥವಾ 'classical conditioning' ಎಂಬುದನ್ನು ಕಂಡುಹಿಡಿದ. ಆಕಸ್ಮಿಕವಾಗಿ ಅದು ಆತನಿಗೆ ಅರ್ಥವಾಯಿತು. ಆತನ ಪ್ರಯೋಗಶಾಲೆಯಲ್ಲಿ ಸಾಕಿದ ನಾಯಿಗೆ ಪ್ರತಿದಿನ ಆತನೇ ಆಹಾರ ಕೊಡುತ್ತಿದ್ದ. ಆದರೆ Pavlov ಕೈಯಲ್ಲಿ ಆಹಾರವಿಲ್ಲದಿದ್ದರೂ ನಾಯಿ ಜೊಲ್ಲು ಸುರಿಸುತ್ತಿತ್ತು. ಮುಂದಿನ ದಿನಗಳಲ್ಲಿ ಆಹಾರ ಕೊಡುವಾಗ ಆತ ಒಂದು ಸಣ್ಣ ಬೆಲ್ ಬಾರಿಸುತ್ತಿದ್ದ. ಸ್ವಲ್ಪ ದಿನ ಕಳೆದ ಮೇಲೆ ಕೇವಲ ಬೆಲ್ ಹೊಡೆದರೆ ನಾಯಿ ಜೊಲ್ಲು ಸುರಿಸುತ್ತಿತ್ತು. ಇದು ಬಿಹೇವಿಯರಲ್ ಸೈಕಾಲಜಿಯ ಮಹತ್ವದ ಪ್ರಯೋಗವಾಗಿತ್ತು.

             ಇದೇ ತಳಹದಿಯ ಮೇಲೆ ಅಮೆರಿಕಾದಲ್ಲಿ ಡಾ.ವ್ಯಾಟ್ಸನ್ ಒಂದು ವಿಲಕ್ಷಣ ಪ್ರಯೋಗ ಮಾಡಿದ. ಅದು ಆತನಿಗೆ ಖ್ಯಾತಿಯ ಜೊತೆಗೆ ಕುಖ್ಯಾತಿಯನ್ನೂ ತಂದಿತು. John B. Watson ಹಾಗೂ ಆತನ ಶಿಷ್ಯ Rosalie Rayner 1920ರಲ್ಲಿ Journal of Experimental Psychology ಎಂಬ ಸರಣಿಯಲ್ಲಿ ಮೊದಲ ಬಾರಿಗೆ 'Little Albert Experiment' ಬಗ್ಗೆ ಉಲ್ಲೇಖಿಸಿದರು.
             ಒಂದು ಫೋಬಿಯಾ ಅಥವಾ ಹೆದರಿಕೆಯನ್ನು ಮಗುವಿನ ಮನಸ್ಸಿಗೆ ತರುವುದು ಅದರ ಗುರಿಯಾಗಿತ್ತು. ಅದಕ್ಕೋಸ್ಕರ ಅವರು ಒಂಬತ್ತು ತಿಂಗಳ ಶಿಶುವನ್ನು ಆಯ್ಕೆ ಮಾಡಿಕೊಂಡರು. ಅದಕ್ಕೆ 'Albert ' ಎಂದು ನಾಮಕರಣ ಮಾಡಲಾಯಿತು. Pavlov ಮಾಡಿದ ಪ್ರಯೋಗಗಳೇ ಇಲ್ಲೂ ಸಹ ನಡೆಯಿತು. ಆದರೆ ಇಲ್ಲಿ ಮನುಷ್ಯನ ಮೇಲೆಯೇ ಪ್ರಯೋಗ ನಡೆಯಿತು.
          ಆಲ್ಬರ್ಟ್ ಮುಂದೆ ಮೊದಲು ಒಂದು ಮೊಲ , ನಾಯಿಯನ್ನು ತರಲಾಯಿತು . ಯಾವುದೇ ಹೆದರಿಕೆ ಇಲ್ಲದೆ ಆಲ್ಬರ್ಟ್ ಅದರೊಡನೆ ಆಟವಾಡಿದ , ಕುಣಿದಾಡಿದ . ನಂತರ ಜೋರಾದ ಬೆಲ್ ಶಬ್ದ ಮಾಡಲಾಯಿತು . ಆಲ್ಬರ್ಟ್ ಹೆದರಿ ಅಳಲಾರಂಭಿಸಿದ . ನಿಧಾನವಾಗಿ ಆತನಿಗೆ ಒಂದು ಫೋಬಿಯ ಇಂಡ್ಯೂಸ್ ಮಾಡಲಾಯಿತು . ಪದೇ ಪದೇ ಆತನ ಎದುರಿಗೆ ನಾಯಿ , ಮೊಲ ತಂದು ಬಿಟ್ಟು ಜೋರಾದ ಶಬ್ದ ಮಾಡುತ್ತಿದ್ದರು . ವ್ಯಾಟ್ಸನ್ ನೀಡಿದ ಹೈಪೊಥೆಸಿಸ್ ನಿಜವಿತ್ತು . ಆಲ್ಬರ್ಟ್ ಗೆ ಫೋಬಿಯಾ ಶುರುವಾಯಿತು . ವ್ಯಾಟ್ಸನ್ ಪ್ರಸಿದ್ಧನಾದ , ಆದರೆ ಆಲ್ಬರ್ಟ್ ? . ಕೆಲವರು ಹೇಳುವ ಪ್ರಕಾರ ಕೇವಲ ನಾಯಿ , ಮೊಲಕ್ಕೆ ಈ ಪ್ರಯೋಗ ಸೀಮಿತವಾಗಿರಲಿಲ್ಲ . ಅಮ್ಮನ ಫೋಟೋ ತೋರಿಸಿ ಬೆಲ್ ಶಬ್ದ ಮಾಡುತ್ತಿದ್ದರು . ಪತ್ರಿಕೆಯೊಂದು ಆಲ್ಬರ್ಟ್ ಗೆ ಸಾಂತ ಕ್ಲಾಸ್ ಕಂಡರೂ ಹೆದರಿಕೆ ಎಂದು ವರದಿ ಮಾಡಿತು . ಮತ್ತೆ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಲ್ಬರ್ಟ್ ಯಾರು ಎಂಬುದನ್ನು ಸಂಶೋಧಿಸಿದರು . ವ್ಯಾಟ್ಸನ್ ನ ಆಸ್ಪತ್ರೆಯಲ್ಲಿಯೇ ಕೆಲಸ ಮಾಡುವ ಒಬ್ಬ ನರ್ಸ್ ಮಗನೇ ಆಲ್ಬರ್ಟ್ ಎಂದು ನಂಬಲಾಯಿತು . ಅವಳಿಗೆ ತನ್ನ ಮಗನ ಮೇಲೆ ನಡೆಯುತ್ತಿದ್ದ ಪ್ರಯೋಗ ಗೊತ್ತೇ ಇರಲಿಲ್ಲ ಎಂದು ಕೆಲವರೆಂದರೆ , ಆಕೆಗೂ ಗೊತ್ತಿತ್ತು ಎಂದು ಕೆಲವರೆಂದರು . ಇವನೇ ಆಲ್ಬರ್ಟ್ ಎಂದು ಹತ್ತು ಹಲವು ಜನರೆಡೆಗೆ ಬೊಟ್ಟು ಮಾಡಿ ತೋರಿಸಿದರು . ಕೆಲವರ ಪ್ರಕಾರ ತಾಯಿಗೆ ವಿಷಯ ತಿಳಿದು ಮಗನ್ನನ್ನು ಕರೆದುಕೊಂಡು ದೂರ ಹೋದಳು . ಅದೇನೇ ಇರಲಿ ಆಲ್ಬರ್ಟ್ ತನ್ನ ಹೋರಾಟದಲ್ಲಿ ಏಕಾಂಗಿಯಾದ . ಜೀವನವಿಡೀ ಹೆದರಿಕೆಯಲ್ಲೇ ನಲುಗಿ ಹೋಗಿದ್ದಿರಬಹುದು ಆ ಜೀವ .
ನಂತರದ ದಿನಗಳಲ್ಲಿ ಈ ಪ್ರಯೋಗದ ಮೇಲೆ ತೀವ್ರ ತರವಾದ ಟೀಕೆಗಳು ಕೇಳಿ ಬಂದವು . ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ಸಹ ಈ ಪ್ರಯೋಗ ನಡೆಸಿದ್ದು ತಪ್ಪು ಎಂದು ವರದಿ ನೀಡಿತು . ಅಷ್ಟೇ ಅಲ್ಲದೇ ಇನ್ನು ಮುಂದೆ ಮನುಷ್ಯರನ್ನು ಪ್ರಯೋಗಗಳಿಗೆ ಉಪಯೋಗಿಸಬಾರದು ಎಂಬ ನಿರ್ಬಂಧ ಹೇರಲಾಯಿತು .
ಆದರೆ ಈ ಪ್ರಯೋಗ ಬಿಹೇವಿಯರಲ್ ಸೈನ್ಸ್ ನ ಒಂದು ಮೈಲಿಗಲ್ಲು . ಮನೋವಿಜ್ಞಾನದ ದಿಕ್ಕನ್ನೇ ಬದಲಾಯಿಸಿದ ಪ್ರಯೋಗಕ್ಕೆ ಅರ್ಪಿಸಿಕೊಂಡ ಆಲ್ಬರ್ಟ್ ಗೆ ನಾವು ಋಣಿಗಳು . ಭಾರತದ ಮಟ್ಟಿಗೆ ಮನೋರೋಗ ಎಂದರೆ ಕೇವಲ ಹುಚ್ಚು ಎಂದಷ್ಟೇ . ಆದರೆ ನಮ್ಮ ನಗು ,ಅಳು ,ಕೋಪ ,ಪರಿತಾಪ ಎಲ್ಲವೂ ಮನೋರೋಗಗಳೇ ! . ಎಲ್ಲವೂ ಪೂರ್ವ ನಿರ್ಧರಿತ ನಿಯಮಗಳು , 'ಕ್ಲಾಸಿಕಲ್ ಕಂಡೀಶನ್ ' .