15/6/16

ಒಂದೂರಲ್ಲೊಂದಿನ

ಪ್ರವಾಸ ಕಥನಗಳನ್ನು ನಮ್ಮ ಕೆಲವು ಬರಹಗಾರರು ಕೇವಲ ಎಲ್ಲಿಗೆ ಹೋದೆ ? ಹೇಗೆ ಹೋದೆ ? ಏನೇನು ತಿಂದೆ ? ಇಷ್ಟಕ್ಕೇ ಸೀಮಿತಗೊಳಿಸಿಬಿಡುತ್ತಾರೆ . ಎಲ್ಲರಿಗೂ ಕಾಣುವ ವಿಷಯಗಳನ್ನು ಬರೆಯುವುದು ಅನಗತ್ಯ ಎಂಬುದು ನನ್ನ ಅನಿಸಿಕೆ . ಯಾವ ವ್ಯಕ್ತಿಗೆ ತಾನಿರುವ ಜಾಗದಲ್ಲೇ ಕುತೂಹಲವಿಲ್ಲವೋ, ಆತ ಪ್ರವಾಸ ಮಾಡುವುದು ಸಂಪನ್ಮೂಲದ ಪೋಲು ಅಷ್ಟೇ . ನಾನು ಬರೆಯುತ್ತಿರುವ ಈ ಪ್ರವಾಸ ಕಥನ ಮೈಸೂರಿನಿಂದ ಶುರುವಾಗುವುದಿಲ್ಲ . 'ಮೈಸೂರು ಟು ಊಟಿ' ಎಂದು ಗೂಗಲ್ ಮಾಡಿದರೆ ಅದೇ ನಿಮಗೆ ನಂಜನಗೂಡು , ಗುಂಡ್ಲುಪೇಟೆ ಮಾರ್ಗ  ತೋರಿಸುತ್ತದೆ . ಗುಂಡ್ಲುಪೇಟೆಯವರೆಗೂ ಸುಗಮವಾಗಿ ಸಾಗಿಬಿಡಬಹುದು . ಗುಂಡ್ಲುಪೇಟೆಯಿಂದ ಬಲಕ್ಕೆ ತಿರುಗಿದರೆ ಕೇರಳದ ವಯ್ನಾಡಿನ ಕಡೆಗೆ ಹೋಗುತ್ತದೆ , ನೇರವಾಗಿ ಸಾಗಿದರೆ ತಮಿಳುನಾಡಿನ ನೀಲಗಿರಿ ಜಿಲ್ಲೆ ತಲುಪುತ್ತೇವೆ .
ನನಗೆ ಈ ದಾರಿಯಲ್ಲಿ ಸಾಗಿದರೆ ಮೊದಲು ನೆನಪಾಗುವುದೇ ' ವೀರಪ್ಪನ್ ' . ನಾನು ಚಿಕ್ಕವನಿದ್ದಾಗ ಅಲ್ಲ ಮೊನ್ನೆ ಮೊನ್ನೆಯ ತನಕ ಒಬ್ಬ ವೀರಪ್ಪನ್ ನ ಹಿಡಿಯೋಕೆ ಆಗಿಲ್ವ ? ಎಂದೇ ಅನಿಸುತಿತ್ತು . ಒಮ್ಮೆ ಆ ಜಾಗಗಳಲ್ಲಿ ಓಡಾಡಿ ಬಂದ ಮೇಲೆ ನನ್ನ ಅಜ್ಞಾನದ ಅರಿವಾಯಿತು . ಗುಂಡ್ಲುಪೇಟೆ ದಾಟಿದ ಮೇಲೆ ಬಂಡೀಪುರ ರಿಸರ್ವ್ ಫಾರೆಸ್ಟ್ ಮೂಲಕ ನಾವು ಸಾಗಬೇಕು . ಕರ್ನಾಟಕ ,ತಮಿಳುನಾಡು ಹಾಗೂ ಕೇರಳ ಈ ಮೂರೂ ರಾಜ್ಯಗಳು ಇಲ್ಲಿ ಬಂದು ಸಂಧಿಸುತ್ತವೆ . ಪೂರ್ವಘಟ್ಟಗಳು ಮುಗಿದು ಪಶ್ಚಿಮಘಟ್ಟದ ಸುಂದರ ಸಹ್ಯಾದ್ರಿ ಪರ್ವತ ಶ್ರೇಣಿಗಳು ಶುರುವಾಗುವುದು ಇಲ್ಲಿಂದಲೇ . ಪಾಲಾರ್ ನದಿಯೇ ಕರ್ನಾಟಕ ಹಾಗೂ ತಮಿಳುನಾಡಿನ ಗಡಿ . ಇದೇ ನದಿಯಲ್ಲೇ ವೀರಪ್ಪನ್ ತನ್ನ ರಕ್ತ-ಸಿಕ್ತ ಕೈಗಳನ್ನು ತೊಳೆದುಕೊಂಡಿದ್ದ . ಹದಿನೆಂಟು ಸಾವಿರ ಹೆಕ್ಟೇರು ಕಾಡಿಗೆ ರಾಜನಂತೆ ಮೂವತ್ತಾರು ವರ್ಷ ಇಡೀ ಕಾಡನ್ನೇ ನಡುಗಿಸಿದ . ಇಲ್ಲಿನ ವನ್ಯ ಸಂಪತ್ತು ಎಷ್ಟಿದೆ ಎಂದರೆ ಈಗಲೂ ಕಾಡು ಪ್ರಾಣಿಗಳನ್ನು ರಸ್ತೆ ಬದಿಯಲ್ಲೇ ನೋಡಬಹುದು . ವೀರಪ್ಪನ್ ಕಾಲಕ್ಕೆ ಇನ್ನೆಷ್ಟು ಸಂಪತ್ತು ಇದ್ದಿರಬೇಡ ? . ಆತ ಒಬ್ಬನೇ ಸುಮಾರು ಎರಡು ಸಾವಿರ ಆನೆಗಳನ್ನು ಬೇಟೆ ಆಡಿದ , ಸುಮಾರು ನೂರತೊಂಬತ್ತನಾಲ್ಕು ಜನರನ್ನು ಸಾಯಿಸಿದ . ಆತನನ್ನು ಬಗ್ಗು ಬಡಿಯಲು ನಮ್ಮ ಸರಕಾರಗಳು ಬರೋಬ್ಬರಿ ಏಳುನೂರಾ ಎಂಬತ್ತು ಕೋಟಿ ವ್ಯಯಿಸಿದರು . ಏಷಿಯಾದ ನಂಬರ್ ಒನ್ ನರಹಂತಕ ಹುಟ್ಟಿ ಬೆಳೆದಿದ್ದು ಇಲ್ಲೇ . ಮಹದೇಶ್ವರ ಬೆಟ್ಟ , ಸತ್ಯಮಂಗಲ , ಮಧುಮಲೈ ಕಾಡುಗಳೇ ಅವನ ರಾಜ್ಯ . ಅಷ್ಟಕ್ಕೇ ನನ್ನ ಯೋಚನೆ ನಿಂತಿದ್ದರೆ ಸರಿ ಇತ್ತೇನೋ , ಆದರೆ ಮನದ ಹುಚ್ಗುದುರೆಗೆ ಲಗಾಮೆಲ್ಲಿ ? . ವೀರಪ್ಪನ್ ಗು ಹಿಂದೆ ಮುಮ್ಮಟ್ಟಿವಾಯನ್ ಎಂಬ ವ್ಯಕ್ತಿ ಈ ಕಾಡನ್ನು ಆಳಿದ್ದಾನೆ . ಅವನದೇ ಮೀಸೆಯಿಂದ ವೀರಪ್ಪನ್ ಇನ್ಸ್ಪೈರ್ ಆಗಿದ್ದಿರಬಹುದು . 
ಬಂಡೀಪುರದಿಂದ ಮುಂದೆ ಮಧುಮಲೈಗೆ ನಾವು ಹೋಗಬೇಕು . ಮಧುಮಲೈ ತಮಿಳುನಾಡಿಗೆ ಸೇರಿದೆ , ಇದೊಂದು ಹುಲಿ ಸಂರಕ್ಷಿತ ಪ್ರದೇಶ .ಏಷಿಯಾದ ಆನೆಗಳ ತವರು ಇದು , ವಿಶ್ವಸಂಸ್ಥೆ ಇದನ್ನು ಎನ್ಡೇಂಜರ್ಡ್ ಎಂದು ಘೋಷಿಸಿದೆ . ಕಳೆದ ದಶಕದಿಂದ ಇಲ್ಲಿಯವರಿಗೆ ಸುಮಾರು ಅರ್ಧದಷ್ಟು ಸಂತತಿ ನಶಿಸಿಹೋಗಿದೆ . ಕಾರಣ , ನಮ್ಮ ಎಕಾಲಜಿಯ ಪದ ' ಹ್ಯಾಬಿಟ್ಯಾಟ್ ಲಾಸ್ ' ಹಾಗೂ ಅತಿಯಾದ ಬೇಟೆ .  ಬಂಡೀಪುರದಿಂದ ಮಧುಮಲೈ ದಾಟುವವರೆಗೂ ವಾಹನ ನಿಲ್ಲಿಸುವ ಹಾಗಿಲ್ಲ , ಚೆಕ್ ಪೋಸ್ಟ್ ಒಂದನ್ನು ಬಿಟ್ಟು . ಹಾಗೆಯೇ ರಿಸರ್ವ್ ಫಾರೆಸ್ಟ್ ಒಳಗೆ ಓಡಾಡುವುದು ಅಪರಾಧ . ರಾತ್ರಿ ಒಂಬತ್ತರಿಂದ ಬೆಳಿಗ್ಗೆ ಆರರವರೆಗೆ ವಾಹನ ಸಂಚಾರ ನಿಷಿದ್ಧ . ರಾತ್ರಿ ಕೇವಲ ಎರಡು ಕರ್ನಾಟಕ ಸಾರಿಗೆ ಬಸ್ಸನ್ನು ಮಾತ್ರ ಬಿಡುತ್ತಾರೆ . 
ಕೆನೆತ್ ಆಂಡರ್ಸನ್ ಅವರ ಬೇಟೆ ಪುಸ್ತಕ ಓದಿದರೆ ನಿಮಗೆ ಈ ಕಾಡಿನ ಪರಿಚಯ ಚೆನ್ನಾಗೇ ಇರುತ್ತದೆ . ಇದೇ ಕಾಡಿನಲ್ಲಿ ಕೆನೆತ್ ಬಹಳಷ್ಟು ನರಭಕ್ಷಕ ಹುಲಿಗಳನ್ನು ಹೊಡೆದಿದ್ದಾರೆ . ಅಷ್ಟಿದ್ದ ಹುಲಿಗಳ ಸಂಖ್ಯೆ ಈಗ ನಾವೇ ಅವುಗಳನ್ನು ರಕ್ಷಣೆ ಮಾಡುವ ಹಂತ ತಲುಪಿದೆ . ಪ್ಲಾಸ್ಟಿಕ್ ಎಸೆಯುವುದು ನಿಷಿದ್ಧವಾದರೂ ಅಲ್ಲಲ್ಲಿ ಪ್ಲಾಸ್ಟಿಕ್ ಕಾಣಬಹುದು . ಮಧಿಮಲೈ ನಂತರ ಎರಡು ದಾರಿಯಿಂದ ಊಟಿಗೆ ಹೋಗಬಹುದು . ಮಧುಮಲೈ ಇಂದ ಗುಡಲೂರಿಗೆ ತಲುಪಿ ಅಲ್ಲಿಂದ ಊಟಿಗೆ ಹೋಗಬಹುದು . ಭಾರಿ ವಾಹನಗಳು , ಬಸ್ಸು ಎಲ್ಲವೂ ಇದೆ ದಾರಿಯಲ್ಲಿ ಸಾಗುತ್ತವೆ . ಇನ್ನೊಂದು ದಾರಿ ತೆಪ್ಪಕಾಡಿನ ಮೂಲಕ ಊಟಿ ಸೇರುತ್ತದೆ . ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷಿದ್ಧ . ಸಿಂಗಲ್ ರೋಡ್ ಆದ್ದರಿಂದ ವಾಹನ ಚಾಲನೆ ಕಷ್ಟ , ಆದರೆ ಇದೇ ಊಟಿಗೆ ಹತ್ತಿರದ ದಾರಿ . ನೀವೇನಾದರೂ ಕಾರು ಅಥವಾ ಬೈಕಿನಲ್ಲಿ ಹೋದರೆ ಇದೇ ದಾರಿಯಲ್ಲಿ ಹೋಗಿ . ಅತ್ಯಂತ ಸುಂದರ ಹಾಗೂ ಅಪಾಯಕಾರಿ ರಸ್ತೆ . ಮೂವತ್ತಾರು ಹೇರ್ ಪಿನ್ ತಿರುವುಗಳು , ಸುಮಾರು ಎಂಟು ಸಾವಿರ ಅಡಿಯ ಬೆಟ್ಟ ಹತ್ತಬೇಕು . ಭಯ ಬೇಡ ಪ್ರತಿ ತಿರುವುಗಳಲ್ಲೂ ಆಂಬುಲೆನ್ಸ್ ನಂಬರ್ , ಫ್ರೀ ಶವದ ವಾಹನದ ಸೌಲಭ್ಯವಿದೆ . ಅಕ್ಷರಶಃ ಸ್ವರ್ಗಕ್ಕೆ ಮೂರೇ ಗೇಣು . ಪ್ರತಿ ವರ್ಷ ಹದಿನೈದಕ್ಕೂ ಹೆಚ್ಚು ಅಪಘಾತಗಳು ಇಲ್ಲಿ ಸಂಭವಿಸುತ್ತದೆ . ಬೆಟ್ಟವನ್ನು ಹತ್ತುತಿದ್ದಂತೆಯೇ ಕುಳಿರ್ಗಾಳಿ ನಿಮ್ಮನ್ನು ಸ್ವಾಗತಿಸುತ್ತದೆ . ಕಲ್ಹತ್ತಿ ಎಂಬ ಸಣ್ಣ ಊರು ಸಿಗುತ್ತದೆ , ಮತ್ತೆ ಸುಮಾರು ಇಪ್ಪತ್ತು ಕಿಲೋಮೀಟರ್ ಮೇಲೆ ಹತ್ತಿದರೆ ಊಟಿ ತಲುಪುತ್ತೇವೆ . 

ಊಟಿ ಅಥವಾ ಉದಕಮಂಡಲ ಭಾರತದ ಟಾಪ್ ಐದು ಹಿಲ್ ಸ್ಟೇಷನ್ ಗಳಲ್ಲಿ ಒಂದು . ಊಟಿಯ ಇತಿಹಾಸದ ಮೊದಲ ದಾಖಲೆ ಸಿಗುವುದು ಹೊಯ್ಸಳರ ಕಾಲದಿಂದ . ವಿಷ್ಣುವರ್ಧನ ಆಳಿದ ದಾಖಲೆಗಳು ಸಿಗುತ್ತವೆ . ತೋಡ ಮತ್ತು ಬಡಗ ಎಂಬ ಎರಡು ಬುಡಕಟ್ಟು ಜನರು ಇಲ್ಲಿ ವಾಸಿಸುತ್ತಿದರು . ಇಂದಿಗೂ ಇಲ್ಲಿ ಬಡಗ ಭಾಷೆಯನ್ನು ಕೇಳಬಹುದು . ನಂತರ ಟಿಪ್ಪು ಸುಲ್ತಾನ್ ಊಟಿಯನ್ನು ಆಳಿದ . ಬ್ರಿಟಿಷರು ಟಿಪ್ಪುವನ್ನು ಸೋಲಿಸಿ ಊಟಿಯನ್ನು ವಶಪಡಿಸಿಕೊಂಡರು . ' ಹಿಲ್ ಸ್ಟೇಷನ್ ' ಎಂಬ ಪದ ಬಳಕೆ ಬಂದದ್ದೇ ಬ್ರಿಟೀಷರಿಂದ . ಊಟಿ  ಮದ್ರಾಸ್ ಪ್ರೆಸಿಡೆನ್ಸಿಯ ಬೇಸಿಗೆಯ ರಾಜಧಾನಿ ಆಯಿತು . ಇಲ್ಲಿಗೆ ಬಂದ ಎಷ್ಟೋ ಬ್ರಿಟಿಷ್ ಅಧಿಕಾರಿಗಳು ಊಟಿಯನ್ನು ಸ್ವಿಟ್ಜರ್ಲ್ಯಾಂಡ್ ಗೆ ಹೋಲಿಕೆ ಮಾಡಿ ತಮ್ಮ ಪತ್ರ , ಡೈರಿಯಲ್ಲಿ ಬರೆದುಕೊಂಡಿದ್ದಾರೆ . 
ಊಟಿ ಸಮುದ್ರ ಮಟ್ಟದಿಂದ  ಸುಮಾರು ಎರಡುಸಾವಿರದ ಐನೂರು ಮೀಟರ್ ಎತ್ತರದಲ್ಲಿ ಇದೆ . ಚಳಿಗಾಲದಲ್ಲಿ ತಾಪಮಾನ ಸೊನ್ನೆ ಡಿಗ್ರಿ ತಲುಪುತ್ತದೆ , ಆದರೆ ವಿಶೇಷವೆಂದರೆ ಇಲ್ಲಿ ಹಿಮಪಾತ ಆಗುವುದಿಲ್ಲ . ಊಟಿಯ ಆರ್ಥಿಕತೆ ಸಂಪೂರ್ಣವಾಗಿ ಕೃಷಿ ಹಾಗೂ ಪ್ರವಾಸೋದ್ಯಮದ ಮೇಲೆ ನಿಂತಿದೆ . ಊಟಿಯ ಬೋರ್ಡಿಂಗ್ ಸ್ಕೂಲ್ ಬಹಳ ಪ್ರಸಿದ್ಧಿ . ಶಾಲೆಗಳೂ ಸಹ ಅರ್ಥ ವ್ಯವಸ್ಥೆಗೆ ಸ್ವಲ್ಪ ಮಟ್ಟಿನ ಕೊಡುಗೆ ನೀಡುತ್ತದೆ . 
ನಾವು ಮೊದಲು ತಲುಪಿದ್ದು ಗವರ್ನಮೆಂಟ್ ಬೊಟೋನಿಕಲ್ ಗಾರ್ಡನ್ ಗೆ , ಬ್ರಿಟಿಷರು ಕಟ್ಟಿದ ಹಿಲ್ ಸ್ಟೇಷನ್ ಎಂದರೆ ಬೊಟೋನಿಕಲ್ ಗಾರ್ಡನ್ ಇರಲೇಬೇಕು . ಇದು ಸುಮಾರು ಇಪ್ಪತ್ತೆರಡು ಎಕರೆ ವಿಸ್ತೀರ್ಣ ಹೊಂದಿದೆ . ಸಾವಿರಕ್ಕೂ ಹೆಚ್ಚು ಪ್ರಬೇಧದ ಗಿಡ-ಮರಗಳನ್ನು ಇಲ್ಲಿ ಕಾಣಬಹುದು . ಪ್ರತಿ ವರ್ಷ ಮೇ ತಿಂಗಳಲ್ಲಿ  ಪ್ರದರ್ಶನ ಸಹ ಇರುತ್ತದೆ . ಇಪ್ಪತ್ತು ಮಿಲಿಯನ್ ವರ್ಷ ಹಳೆಯ ಮರದ ಪಳಿಯುಳಿಕೆ ಇಲ್ಲಿನ ಸೆಂಟರ್ ಆಫ್ ಅಟ್ರಾಕ್ಷನ್ . 
ನಂತರ ನಾವು ಹೋಗಿದ್ದು ' ದೊಡ್ಡ ಬೆಟ್ಟ ಪೀಕ್ ' ಗೆ . ಈ ಹೆಸರು ಕನ್ನಡದಿಂದಲೇ ಬಂದಿದೆ . ದೊಡ್ಡಬೆಟ್ಟ ಸಮುದ್ರ ಮಟ್ಟದಿಂದ ಎಂಟು ಸಾವಿರದ ಆರುನೂರಾ ಐವತ್ತು ಅಡಿ ಎತ್ತರದಲ್ಲಿದೆ . ಇದರ ಸುತ್ತ ಕೂಡ ರಿಸರ್ವ್ ಫಾರೆಸ್ಟ್ ಇದೆ , ಸಂಜೆ ಐದು ಗಂಟೆಯ ನಂತರ ಪ್ರವೇಶ ನಿಷಿದ್ಧ . ದಕ್ಷಿಣ ಭಾರತದ ನಾಲ್ಕನೇ ಹಾಗೂ ನೀಲಗಿರಿ ಜಿಲ್ಲೆಯ ಮೊದಲನೇ ಪೀಕ್ ಪಾಯಿಂಟ್ . ಇದು ಎಷ್ಟು ಎತ್ತರದಲ್ಲಿ ಇದೆ ಎಂದರೆ , ಇದರ ಮೇಲೆ ಕಟ್ಟಿರುವ ಟೆಲಿಸ್ಕೋಪ್ ಟವರ್ ಹತ್ತಿದರೆ ನಮಗೆ ಮೈಸೂರಿನ ಚಾಮುಂಡಿ ಬೆಟ್ಟ ಕಾಣಿಸುತ್ತದೆ . ಸಂಜೆಯ ಹೊತ್ತಿಗೆ ಜಾಕೆಟ್ ಇಲ್ಲದೆ ಮೇಲೆ ಹೋದರೆ , ಮೇಲೇ ಹೋಗುವುದು ಖಂಡಿತ . 

ಊಟಿಯ ಪ್ರಮುಖ ಆಕರ್ಷಣೆ ನೀಲಗಿರಿ ರೈಲ್ವೇಸ್ . ಊಟಿ ಹಾಗೂ ಮೇಟುಪಾಳಿಯಂ ಮಧ್ಯೆ ನ್ಯಾರೋ ಗೆಜಿನ ರೈಲು ಓಡುತ್ತದೆ . ಇದನ್ನು ಯುನೆಸ್ಕೋ ' ವರ್ಲ್ಡ್ ಹೆರಿಟೇಜ್ ಸೈಟ್ ' ಎಂದು ಗುರುತಿಸಿದೆ . ಭಾರತದ ಅತಿ ಪ್ರಾಚೀನ ಮೌಂಟನ್ ರೈಲ್ವೆ ಇದು . ಸಾವಿರದ ಎಂಟುನೂರಾ ಎಂಬೆತ್ತರಡರಲ್ಲಿ ಆರ್ಥರ್ ಎಂಬ ಸ್ವಿಸ್ ಇಂಜಿನಿಯರ್ ಈ ರೈಲಿನ ನೀಲ ನಕ್ಷೆ ಸಿದ್ಧಪಡಿಸಿದ . ಕುನ್ನೂರು ಹಾಗೂ ಮೇಟುಪಾಳಿಯಂ  ಮಧ್ಯೆ ಸಾವಿರದ ಎಂಟುನೂರಾ ತೊಂಬತ್ತಒಂಬತ್ತರಲ್ಲಿ ರೈಲು ಓಡಾಡಲು ಶುರುವಾಯಿತು . ಸಾವಿರದ ಒಂಬೈನೂರ ಮೂರರಲ್ಲಿ ಭಾರತ ಸರ್ಕಾರ ಇದನ್ನು ಖರೀದಿಸಿ ಊಟಿಯವರೆಗೂ ಮುಂದುವರೆಸಲಾಯಿತು . ಇದಕ್ಕೆ ' ಟಾಯ್ ಟ್ರೈನ್ ' ಎಂಬ ಅಡ್ಡ ಹೆಸರಿದೆ . ಕೇವಲ ನಾಲ್ಕು ಭೋಗಿ ಇರುವ ಈ ರೈಲು ಮಕ್ಕಳ ಆಟಿಕೆಯಂತೆ ಕಾಣುತ್ತದೆ . ಊಟಿ ಹಾಗೂ ಕುನ್ನೂರಿನ ಮಧ್ಯೆ ಐದು ನಿಲ್ದಾಣಗಳಿಗೆ , ಎಲ್ಲಾ ನಿಲ್ದಾಣಗಳೂ ಸ್ವಚ್ಛ ಹಾಗೂ ನೀಲಿ ಬಣ್ಣದಿಂದ ಕಂಗೊಳಿಸುತ್ತದೆ . ಕೇವಲ ಹದಿನಾರು ಮೇಲಿನ ಈ ಪ್ರಯಾಣದಲ್ಲಿ ಹದಿನಾರು ಟನಲ್ ಗಳು , ಇನ್ನೂರ ಐವತ್ತು ಸೇತುವೆಗಳಿವೆ . ಸುಮಾರು ತೊಂಬತ್ತು ನಿಮಿಷಗಳಷ್ಟು ಪ್ರಯಾಣ ಇದು .  ಇದಕ್ಕೆ ನೀವು ಖರ್ಚು ಮಾಡಬೇಕಾಗಿರುವುದು ಕೇವಲ ಹತ್ತು ರೂಪಾಯಿ . ಪ್ರಯಾಣ ಮಾತ್ರ ಚಿರ ನೆನಪು . 'ಸ್ಪರ್ಶ' ಸಿನಿಮಾದಲ್ಲಿ ತೋರಿಸುವುದು ಇದೇ ರೈಲು .

ರೋಸ್ ಗಾರ್ಡನ್ ಹಾಗೂ ಪೈಕಾರ ಲೇಕ್ ಗಳಿಗೆ ಸಮಯದ ಅಭಾವದಿಂದ ಭೇಟಿ ನೀಡಲಾಗಲಿಲ್ಲ . ನೀವು ಹೋಗಬೇಕೆಂದರೆ ಬೇಸಿಗೆ ಹೇಳಿ ಮಾಡಿಸಿದ ಕಾಲ , ಚಳಿಗಾಲದಲ್ಲಿ ಹೋಗಬೇಕೆಂದರೆ ದಪ್ಪಗಿನ ವೂಲೆನ್ ಸ್ವೆಟರ್ ಬೇಕೇ ಬೇಕು  . ವೀಕ್ ಎಂಡ್ ಗಳಲ್ಲಿ ಹೋದರೆ ರೂಮು ಸಿಗುವುದು ಕಷ್ಟ . ಬೇಸಿಗೆಯ ವೀಕೆಂಡ್ ಗಳಲ್ಲಿ ಹತ್ತು ಸಾವಿರ ಕೊಟ್ಟರೂ ಒಂದೂ ರೂಂ ಸಿಗುವುದಿಲ್ಲ . ಹನಿಮೂನ್ ಗೆ ಆರ್ಡರ್ ಕೊಟ್ಟು ಮಾಡಿಸಿದ ಜಾಗ . ಮದುವೆ ಆಗಿರದಿದ್ದರೆ ಹನಿ ಜೊತೆ ಹೋಗಬಹುದು . 
ಹೋಂ ಮೇಡ್ ಚಾಕಲೇಟ್ ಕಡಿಮೆ ಬೆಲೆಗೆ ಸಿಗುತ್ತದೆ . ಜಾಕೆಟ್ , ಸ್ವೆಟರ್ ಗಳು ಚೀಪ್ ಅಂಡ್ ಬೆಸ್ಟ್ . ನೀಲಗಿರಿ ಟೀ ಜಗತ್ ಪ್ರಸಿದ್ಧ . ದೊಡ್ಡಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಟೀ ಫ್ಯಾಕ್ಟರಿಗೆ ಭೇಟಿ ನೀಡಿ ಬಿಟ್ಟಿ ಚಹಾ ಕುಡಿದುಬರಬಹುದು . ಗ್ರೀನ್ ಟೀ , ಏಲಕ್ಕಿ ಟೀ , ಬ್ಲಾಕ್ ಟೀ ಯವುದನ್ನು ಬೇಕಿದ್ದರೂ ತೆಗೆದುಕೊಂಡು ಬರಬಹುದು . 

ಕಾರಿನಲ್ಲಿ ಅಥವಾ ಬಸ್ಸಿನಲ್ಲಿ ಹೋಗುವುದು ಉತ್ತಮ . ಬೈಕು ಅಷ್ಟು ಸೂಕ್ತವಲ್ಲ . ಹೋಗುವ ಮೊದಲು ವಾಹನವನ್ನು ಸರ್ವಿಸ್ ಮಾಡಿಸಿಕೊಳ್ಳಿ , ಇಲ್ಲದಿದ್ದರೆ ತೆಪ್ಪಕಾಡಿನ ಪ್ರಪಾತಕ್ಕೆ ನಿಮ್ಮ ಗಾಡಿಯನ್ನು ತಳ್ಳುವ ಪ್ರಮೇಯ ಬರಬಹುದು . ಸುಮಾರು ಐವತ್ತು ಅರವತ್ತು ಕಿಲೋಮೀಟರಷ್ಟು ದೂರ ಗ್ಯಾರೇಜು ಇರಲಿ ಮನೆ ಸಿಗುವುದೇ ಕಷ್ಟ . ಒಬ್ಬರೇ ಹೋದರೆ ಚಳಿ ಅಸಹನೀಯ , ಜೋಡಿ ಹಕ್ಕಿಗಳಾಗಿ ಹೋಗಿ . ಮುಂದೆ ನಿಮಗೆ ಬಿಟ್ಟಿದ್ದು . 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ