22/5/16

ಡಿಟೆಕ್ಟಿವ್ ಜಿಕೆ : ಕಲೆ (ಭಾಗ-೧)

ಬೆಳಿಗ್ಗೆ ಬೇಗನೆ ಎದ್ದು ವ್ಯಾಯಾಮ ಮಾಡುವುದು ನನ್ನ ಅಭ್ಯಾಸ . ನಾನು ಸೇನೆ ಬಿಟ್ಟು ಹದಿನೈದು ವರ್ಷವೇ ಆದರೂ ಅಲ್ಲಿ ಕಲಿತ ಪಾಠಗಳನ್ನು ಇನ್ನೂ ಮರೆತಿಲ್ಲ . ಇಂದಿಗೂ ಇಪ್ಪತ್ತು ಮೈಲು ಓಡುವಷ್ಟು ಕಸು ನನ್ನಲ್ಲಿದೆ . ವ್ಯಾಯಾಮ ಮುಗಿಸಿ ಬರುವಷ್ಟರಲ್ಲಿ ನನ್ನ ಮೊಬೈಲಿಗೆ ಇಪ್ಪತ್ತೆರಡು ಮಿಸ್ ಕಾಲ್ ಬಂದು ಕುಳಿತಿತ್ತು . ಐಸಿಸ್ ನ ವೆಬ್ಸೈಟುಗಳನ್ನು ದ್ವಂಸ ಮಾಡಿದ ನನ್ನಂತಹ ಒಬ್ಬ ಸ್ಪೈ ಗೆ ಒಂದು ನಂಬರ್ ಪತ್ತೆ ಹಚ್ಚುವುದು ಕಷ್ಟವಲ್ಲ . ತಕ್ಷಣವೇ ಅದು ಬೆಂಗಳೂರಿನ ಮಲ್ಲೇಶ್ವರದ ಸರ್ಕಲ್ ಇನ್ಸ್ಪೆಕ್ಟರ್ ಅವರದು ಎಂದು ತಿಳಿದು ಹೋಯಿತು . ಹತ್ತೇ ನಿಮಿಷದಲ್ಲಿ ನನ್ನ ಮನೆಯ ಮುಂದೆ ಪೋಲಿಸ್ ಜೀಪ್ ಬಂದು ನಿಂತಿತು . ಹತ್ತಿ ಕುಳಿತೆ , ಜೀಪು ಹೊರಟಿತು .
ಪೋಲಿಸ್ ಸ್ಟೇಷನ್ ನಿಂದ ನಾನು ಹಾಗೂ ಇನ್ಸ್ಪೆಕ್ಟರ್ ಜೊತೆಗೇ ಹೊರೆಟೆವು . ' ಶ್ರೀ ವರದ ' ಎಂಬ ಲಾಡ್ಜ್ ನಲ್ಲಿ ಕೊಲೆಯೊಂದು ನಡೆದಿತ್ತು . ಪತ್ತೆ ಹಚ್ಚಲು ಬಹು ಕ್ಲಿಷ್ಟವಾದ ಕೇಸು ಅದಾಗಿತ್ತು . ಗೃಹಮಂತ್ರಿಯವರು ನನ್ನ ಹೆಸರು ಸೂಚಿಸಿದ್ದರಂತೆ . ಆದರೆ ಪೊಲೀಸರಿಗೆ ಅದು ಸ್ವಲ್ಪವೂ ಇಷ್ಟವಿರಲಿಲ್ಲ ಎಂಬುದು ಅವರ ನಡವಳಿಕೆಯಲ್ಲೇ ತಿಳಿಯುತ್ತಿತ್ತು . ಎಂಟು ಗಂಟೆಯ ಸುಮಾರಿಗೆ ಹೋಟೆಲಿನ ಲಾಬಿ ತಲುಪಿದೆ . ರೂಂ ನಂಬರ್ ಹದಿಮೂರರಲ್ಲಿ ಕೊಲೆ ನಡೆದಿತ್ತು . 'ಕ್ರೈಂ ಸೀನ್' ಇಲ್ಲಿ ಒಬ್ಬ ಪತ್ತೇದಾರ ಎಷ್ಟು ಬುಧ್ಧಿವಂತಿಕೆ ತೋರಿಸುತ್ತಾನೋ ಅಷ್ಟು ಕೇಸು ಸುಲಭವಾಗುತ್ತದೆ . ಮತ್ತೆ ಮತ್ತೆ ಕ್ರೈಂ ಸೀನ್ ಕ್ರಿಯೇಟ್ ಮಾಡುವುದು ಅಸಾಧ್ಯವಾದ್ದರಿಂದ ಚುರುಕುತನ ಹಾಗೂ ಆಳ ಜ್ಞಾನ ಬೇಕು . ಫೋಟೋಗ್ರಾಫರ್ ಅನ್ನು ಬರಲು ಹೇಳಿ ಇಂಚು ಇಂಚಿನ ಫೋಟೋ ತೆಗೆಯಲು ಹೇಳಿದೆ . ನಾನು ರೂಮಿನ ಮೂಲೆ ಮೂಲೆಯನ್ನೂ ಜಾಲಾಡತೊಡಗಿದೆ .
ನೀವು ಎಂದಾದರೂ ಕೊಲೆಯನ್ನು ನೋಡಿದ್ದೀರಾ ? ಮೊದಲ ಬಾರಿಗೆ ನೋಡಿದರೆ ಮೂರ್ಛೆ ಹೋಗಿ ಬಿಡುತ್ತೀರಿ . ನಾನೂ ಸಹ ಬಹಳ ಭಯಗೊಂಡಿದ್ದೆ , ಆದರೆ ಸೇನೆ ಎಲ್ಲವನ್ನೂ ಕಲಿಸಿಕೊಟ್ಟಿತ್ತು . ಮೊದಲ ಬಾರಿಗೆ ಶತ್ರು ಸೈನ್ಯದ ಗಾಯಾಳು ಸೈನಿಕ ನನ್ನ ಮುಂದೆ ಬಿದ್ದಿದ್ದ . ನಾನೇಕೆ ಆತನನ್ನು ಸಾಯಿಸಬೇಕು ? ಆತ ಯಾರೆಂದು ನನಗೆ ಗೊತ್ತಿಲ್ಲ , ನನಗೂ ಆತನಿಗೂ ಯಾವ ದ್ವೇಷವೂ ಇಲ್ಲ , ಆತನಿಗೂ ಒಂದು ಕುಟುಂಬ ಇರುತ್ತದೆ ಅಲ್ಲವೇ ? . ಆತನಿಗೆ ಏನೂ ಮಾಡದೇ ಮುಂದೆ ಹೋದೆ . ಆತನ ಗನ್ನು ಸದ್ದು ಮಾಡಿತು . ಅಂದು ನಾನು ಉಳಿದದ್ದೇ ಹೆಚ್ಚು , ಆತ ಗಾಯಗೊಂಡಿದ್ದರಿಂದ ಸರಿಯಾಗಿ ಗುರಿ ಹಿಡಿಯಲು ಸಾಧ್ಯವಾಗದೆ ಗುಂಡು  ನನ್ನ ಕಾಲಿಗೆ  ಬಡಿದಿತ್ತು . ನಾನು ತಿರುಗಿ ಸರಿಯಾಗಿ ಅವನ ಕಣ್ಣಲ್ಲಿ ಕಣ್ಣಿಟ್ಟು ಕುದುರೆ ಎಳೆದೆ . ಹಣೆಯ ಮಧ್ಯೆ ಸರಿಯಾಗಿ ಗುಂಡು ಹೊಕ್ಕಿ ಮೆದುಳನ್ನು ಸೀಳಿ ಆಚೆ ಹೋಯಿತು . ಅಂದಿನಿಂದ ಹಿಂಸೆ , ಸಾವು , ಸಾಯಿಸುವುದರಲ್ಲಿ ವಿಲಕ್ಷಣ ಖುಷಿ ಅನುಭವಿಸುತ್ತೇನೆ .
ರಕ್ತ ಗಡ್ಡೆ ಗಡ್ದೆಯಾಗಿ ಹರಿದಿತ್ತು . ಕೊಲೆ ನಡೆದು ಮೂರ್ನಾಲ್ಕು ಗಂಟೆ ಆಗಿರುತ್ತದೆ . ಕೊಲೆಯಾದ ವ್ಯಕ್ತಿ ಬಲಶಾಲಿಯೇನೂ ಅಲ್ಲ , ಐದೂವರೆ ಅಡಿ ಇದ್ದ . ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು . ಕಿಚನ್ ನೈಫ್ ನಿಂದ ಕೊಲೆ ಮಾಡಲಾಗಿತ್ತು . ಸುಪಾರಿ ಕಿಲ್ಲರ್ ಗಳು ಮಾಡಿದ  ಕೊಲೆಯಲ್ಲ , ಅವರು ಈ ರೀತಿ ಕೆಲಸ ಮಾಡುವುದೇ ಇಲ್ಲ . ಗಾಯ ಹೆಚ್ಚು ಆಳವಾಗಿರಲಿಲ್ಲ , ಮತ್ತೆ ಮತ್ತೆ ಇರಿದು ಸಾಯಿಸಿದ್ದರು . ಕೊಲೆಗಾರನಿಗೆ ದ್ವೇಷವಿದ್ದರೆ ಈ ರೀತಿ ಕೊಲೆ ಮಾಡುತ್ತಾರೆ . ರೂಮು ಗ್ರೌಂಡ್ ಫ್ಲೋರಿನಲ್ಲೇ ಇದ್ದರಿಂದ ಕೊಲೆಗಾರ ಕಿಟಕಿಯನ್ನು ಒಡೆದು ಸುಲಭವಾಗಿ ಒಳಗೆ ಬಂದಿದ್ದ . ರೂಂ ಬಾಯ್ ಬಂದು ಬಾಗಿಲನ್ನು ಬಡಿದನಂತೆ , ಬಾಗಿಲು ತೆಗೆಯಲಿಲ್ಲ . ಬಹಳ ಹೊತ್ತಿನ ನಂತರ ಅನುಮಾನ ಬಂದು ರೂಮಿನ ಬಾಗಿಲು ಒಡೆದರಂತೆ . ಅಲ್ಲಿ ಕೊಲೆ ನಡೆದಿತ್ತು . ಹೋಟೆಲಿನ ಎಲ್ಲಾ ಸಿಬ್ಬಂದಿಯನ್ನು ವಿಚಾರಣೆ ಮಾಡಿದೆ , ಎಲ್ಲರೂ ಗಾಬರಿಗೊಂಡಿದ್ದರು . ಅವರು ನನಗೆ ನಿಷ್ಪ್ರಯೋಜಕ , ಗಾಬರಿಗೆ ಅಡ್ರಿನಲಿನ್ ಉತ್ಪತ್ತಿಯಾಗಿ ಅವರಿಗೆ ಏನೂ ಮನಸ್ಸಿನಲ್ಲಿ ಉಳಿದಿರುವುದಿಲ್ಲ , ಸೂಕ್ಷ್ಮವಾಗಿ ನೋಡಿರುವುದಿಲ್ಲ . ಸಿಸಿಟಿವಿಯ ರೆಕಾರ್ಡ್ ತೆಗೆಸಿದೆ , ಆದರೆ ಕೊಲೆಗಾರ ಬಹಳ ಚಾಲೂಕು . ಕ್ಯಾಮೆರಾದ ಮೇಲೆ ಎರಡು ತುಂಡು ಮ್ಯಾಗ್ನೆಟ್ ಇಟ್ಟಿದ್ದ . ಈ ರೀತಿ ಮ್ಯಾಗ್ನೆಟ್ ಇಡುವುದರಿಂದ ಕ್ಯಾಮೆರಾ ಕೆಲಸ ಮಾಡುವುದಿಲ್ಲ . ಆ ದಾರಿಯೂ ನನಗೆ ಮುಚ್ಚಿಹೋಗಿತ್ತು .
ಕೊಲೆಯಾದ ಚಿರಾಗ್ ಬಳ್ಳಾರಿಯವ , ಆತನ ಜೊತೆ ಅವನ ಸ್ನೇಹಿತೆ ಸಹ ಅದೇ ಹೋಟೆಲಿನಲ್ಲಿ ರೂಮು ಹಾಕಿದ್ದಳು . ಆಕೆಯನ್ನು ಕರೆದು ಕೂರಿಸಿಕೊಂಡೆ , ನಿಧಾನಕೆ ಮಾತಿಗೆ ಎಳೆದೆ . ಇಬ್ಬರೂ ಒಟ್ಟಿಗೆ ಬಂದದ್ದಂತೆ , ಮೆಡಿಕಲ್ ಮಾಡುತ್ತಿದ್ದಾರೆ .ಆದರೆ ಚಿರಾಗ್ ಡ್ರಾಪ್ ಔಟು , ದುಶ್ಚಟ ಹತ್ತಿಸಿಕೊಂಡು ಓದಿಗೆ ಗುಡ್ ಬೈ ಹೇಳಿದ್ದ . ಆದರೆ ಸ್ನೇಹ ಮಾತ್ರ ಮುಂದುವರೆದಿತ್ತು . ಆಕೆ ಶಾಕ್ ಗೆ ಒಳಗಾಗಿದ್ದಳು , ಅವಳನ್ನು ಮನೆಗೆ ಕಳುಹಿಸಿಕೊಟ್ಟೆ .
ಇನ್ಸ್ಪೆಕ್ಟರ್ ವಿಕ್ರಮ್ ನನ್ನನ್ನು ತರಾಟೆಗೆ ತೆಗೆದು ಕೊಂಡರು . ಈ ಕೊಲೆಯ ಸಸ್ಪೆಕ್ಟ್ ಅವಳೇ , ಯಾಕೆ ಬಿಟ್ಟಿರಿ ಎಂದು ಆಕ್ರೋಶಗೊಂಡರು .
" ಆಕೇನ ನೋಡಿದೀರಾ ? ನಾಯಿಗೆ ಹೊಡೆಯುವ ಕೋಲಿನಂತೆ ಇದ್ದಾಳೆ , ಆಸ್ತಮಾ ಬೇರೆ . ಈ ಚಳಿಗಾಲದಲ್ಲಿ ಆಕೆ ಬೆಳಗಿನ ಜಾವ ಎದ್ದು ಬಂದು ಕೊಲೆಮಾಡುವುದು ಅಸಾಧ್ಯ . ಮೋಟಿವೇಶನ್ ಸಹ ಅವಳಿಗಿಲ್ಲ . ಕೊಲೆಯಾದವ ಶಾಸಕರ ಮಗ ಅವನನ್ನು ಕೊಲ್ಲುವಷ್ಟು ಧೈರ್ಯ , ಚಾಕಚಕ್ಯತೆ ಎರಡೂ ಅವಳಲ್ಲಿಲ್ಲ . ಅಷ್ಟಲ್ಲದೇ ಬೆಂಗಳೂರಿಗೆ ಕರೆದುಕೊಂಡು ಬಂದು ಸಾಯಿಸುವ ಅಗತ್ಯ ಇಲ್ಲವೇ ಇಲ್ಲ " ಎಂದು ವಾದಿಸಿದೆ .
ಅಷ್ಟರಲ್ಲಿ ಫೋಟೋಗ್ರಾಫರ್ ಬಂದು ಕರೆದ . ಆತನಿಗೆ ವಜ್ರದ ಹರಳೊಂದು ಸಿಕ್ಕಿತ್ತು . ನನಗೆ ಮನಸ್ಸಿನಲ್ಲಿ ಏನೋ ಹೊಳೆಯಿತು . ತಕ್ಷಣವೇ ದೇಹವನ್ನು ಸ್ಕ್ಯಾನ್ ಮಾಡಲು ಕಳುಹಿಸಿಕೊಟ್ಟೆ , ನಾನೂ ಸಹ ರಕ್ತದ ಸ್ಯಾಂಪಲ್ ತೆಗೆದುಕೊಂಡು , ಆಸ್ಪತ್ರೆಗೂ ಕಳುಹಿಸಿದೆ . ಕೇಸಿಗೆ ಹೊಸ ತಿರುವು ಸಿಕ್ಕಿತ್ತು .
ಅದೇ ಹೋಟೆಲಿನಲ್ಲಿ ತಿಂಡಿ ತಿಂದು , ವೈನ್ ಹೀರಿ ನನ್ನ ಸಿಗಾರಿಗೆ ಬೆಂಕಿ ಇಟ್ಟೆ . ಹಾಗೆಯೇ ಒಂದು ಜೊಂಪು ನನ್ನನ್ನು ಆವರಿಸಿಕೊಂಡಿತು . ವಿಕ್ರಂ , ಡಿಸಿ ಹಾಗೂ ಶಾಸಕರು ಬಂದಾಗ ನನಗೆ ಎಚ್ಚರವಾಯಿತು .
" ಸ್ವಲ್ಪ ಬೇಗನೆ ಸಾಲ್ವ್ ಮಾಡಿ ಸಾರ್ , ಪೊಲಿಟಿಕಲ್ ಪ್ರೆಷರ್ ಇದೆ " ಎಂದರು ಡಿಸಿ . ಬುಲ್ ಶಿಟ್ , ನನಗೆ ಇವೆಲ್ಲಾ ಹಿಡಿಸುವುದಿಲ್ಲ . ಸತ್ತವ ಯಾರೇ ಆದರೂ ಜೀವ ಜೀವವೇ ಅಲ್ಲವೇ . ಶಾಸಕನ ಮಗ ಎಂದು ಬೇಗ ಸಾಲ್ವ್ ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳಲು ನನಗೆ ಇಷ್ಟವಿರಲಿಲ್ಲ . ಸುಮ್ಮನೆ ಔಪಚಾರಿಕವಾಗಿ ಮಾತನಾಡಿಸಿ ಕಳುಹಿಸಿದೆ .
ಡಾಕ್ಟರ್ ರಿಪೋರ್ಟ್ ಗೆ ಕಾಯುತ್ತಾ ಕುಳಿತೆ .
(ಮುಂದುವರೆಯುವುದು ................................)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ