21/7/16

ಖಾರಾಬಾತು -5 (ಸಿಟಿ ಲೈಟ್ಸ್)

ಬೆಳಗಿನ ಜಾವ ಚುಮು-ಚುಮು ಚಳಿಯಲ್ಲಿ ಮಜೆಸ್ಟಿಕ್ ಗೆ ಬಂದಿಳಿದೆ . ಆ ಬೆಳಗಿನ ಜಾವದಲ್ಲೂ ಟ್ಯಾಕ್ಸಿ ಡ್ರೈವರ್ ಗಳು , ಆಟೋ ಡ್ರೈವರ್ ಗಳು ಗಡಿ-ಬಿಡಿಯಿಂದ ಓಡಾಡುತ್ತಿದ್ದರು . ತಮ್ಮ ಗಿರಾಕಿಗಳನ್ನು ತರ ತರದ ರೀತಿಯಲ್ಲಿ ಆಕರ್ಷಿಸುತ್ತಿದರು . ಇವರೆಲ್ಲರ ವ್ಯಾಪಾರಕ್ಕೆ ಬ್ರೇಕ್ ಹಾಕುತ್ತಾ ವೇಗವಾಗಿ ಸಿಟಿ ಬಸ್ಸೊಂದು ನನ್ನೆಡೆಗೆ ಬಂತು . ಬೆಳಕಿನ್ನೂ ಮೂಡಿಲ್ಲವಾದ್ದರಿಂದ ಬೋರ್ಡು ಕಾಣಿಸುತ್ತಿರಲಿಲ್ಲ , ಬಸ್ಸು ಹತ್ತಿ ಕಂಡಕ್ಟರ್ ಬಳಿ ಜಯನಗರದ ಕಡೆ ಹೋಗುತ್ತದೆಯೆ ? ಎಂದು ವಿಚಾರಿಸಿದೆ . ಆತ "ರೀ ಇದು ಜೆ.ಪಿ ನಗರ ಹೋಗುತ್ತೆ ರೂಟ್ ನಂಬರ್ ಹಾಕಿರೋದು ಕಾಣಲ್ವಾ " ಎಂದು ಸೌಜನ್ಯದಿಂದಲೇ ಬೈದು ಕೆಳಗಿಳಿಸಿದ . ಹತ್ತು ನಿಮಿಷ ಕಾದರೂ ಮತ್ತೊಂದು ಬಸ್ಸು ಬರಲೇ ಇಲ್ಲ , ಆದರೆ ಒಂದರ ಹಿಂದೆ ಒಂದರಂತೆ ಆಟೋ , ಕ್ಯಾಬ್ ಗಳು ಓಡಾಡುತ್ತಿದ್ದವು . ಒಂದು ಆಟೋಗೆ ಕೈ ಮಾಡಿ ನಿಲ್ಲಿಸಿದೆ ,
"ಜಯನಗರ ಬರ್ತೀರಾ ಸಾರ್ ?" ಕೇಳಿದೆ , " ಇಲ್ಲ ಕಣ್ರೀ ಹತ್ರದ್ ಏರಿಯಾ ಆದ್ರೆ ಬರ್ತೀನಿ ವಾಪಾಸು ಖಾಲಿ ಬರೋಕ್ ಆಗಲ್ಲ " ಎಂದು ನನ್ನ ಉತ್ತರಕ್ಕೂ ಕಾಯದೆ ಹೊರಟು ಹೋದ .
ಮತ್ತೊಂದು ಕ್ಯಾಬು ನಿಲ್ಲಿಸಿದೆ , " ಇಲ್ಲ ಕಣ್ರೀ ರಾಜಾಜಿನಗರ ಹೋಗ್ತಾ ಇದ್ದೀನಿ " ಎಂದ . ಅರ್ಧ ಗಂಟೆಗೂ ಹೆಚ್ಚು ಕಾಲ ಅಬ್ಬೆಪಾರಿಯಂತೆ ನಿಂತಿದ್ದ ನನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು . " ನೀವು ಎಲ್ಲಿಗೆ ಹೋಗ್ತೀರಾ ಅಲ್ಲೇ ಬಿಡಿ " ಎಂದೇ .
" ಅದೆಲ್ಲ ಆಗೋಲ್ಲ ಸಾರ್ , ಅಲ್ಲಿ ಪ್ರೀಪೈಡ್ ಆಟೋ ಸಿಗತ್ತೆ ಹೋಗಿ " ಎಂದ . ಪ್ರೀಪೈಡ್ ಕೌಂಟರ್ ಗೆ ಹೋಗಿ ಜಯನಗರ  ಫೋರ್ಥ್ ಟಿ ಬ್ಲಾಕ್ ಗೆ ಟಿಕೆಟು ಕೊಂಡುತಂದೆ . ಕೊನೆಗೂ ದೇವರು ಕಣ್ಣು ಬಿಟ್ಟ , ಆಟೋ ಹತ್ತಿ ಮೆಜೆಸ್ಟಿಕ್ ಬಿಟ್ಟೆ . ಕಳೆದ ಬಾರಿ ನಾನು ಬಂದಾಗ ಸಂಜೆಯಾಗಿತ್ತು , ರಸ್ತೆಯಲ್ಲಿ ವಾಹನಗಳು ಗಿಜಿ ಗುಟ್ಟುತಿತ್ತು . ಆದರೆ ಈಗ ರಸ್ತೆ ಖಾಲಿಯಾಗಿತ್ತು  , ಬಸ್ಸಿನಲ್ಲಿ ಮುಕ್ಕಾಲು ಗಂಟೆ ಆಗುತ್ತಿದ್ದ ಪ್ರಯಾಣ ಇಪ್ಪತ್ತೇ ನಿಮಿಷಕ್ಕೆ ಮುಗಿದು ಹೋಯಿತು .
" ಸಾರ್ ಯಾವ ಕ್ರಾಸ್ ಗೆ ಹೋಗ್ಬೇಕು ? " ಆಟೋದವನು ಕೇಳಿದ . " ಸ್ವಾದಿಷ್ಟ್ ಆಹಾರ್ ಹೋಟೆಲ್ ಇದ್ಯಲ್ಲ ಅದರ ಪಕ್ಕದ ಕ್ರಾಸ್ " ಎಂದೆ . ಎರಡು ರೌಂಡು ಇಡೀ ಜಯನಗರ ಸುತ್ತಿದರೂ ಹೋಟೆಲ್ ಸಿಗಲೇ ಇಲ್ಲ . ನನಗೆ 26th ಮೇನ್ ರೋಡ್ ಎಂದು ಗೊತ್ತಿದ್ದರೂ , ಅದೂ ಸಹ ಸಿಗಲಿಲ್ಲ . 25th ಆಗುತ್ತಿದ್ದ ಹಾಗೆ , 27th ಮೇನ್ ರೋಡ್ ಬರುತಿತ್ತು . ಹೀಗೆ ಇನ್ನೊಂದೆರಡು ರೌಂಡು ಹಾಕಿದ ಮೇಲೆ ರೋಡು ಸಿಕ್ಕಿತು . ಪ್ರೀಪೈಡ್ ಬಿಲ್ ನೋಡಿ ದುಡ್ಡು ಕೊಟ್ಟೆ .
" ಏನ್ಸಾರ್ ? ಇಷ್ಟೇನಾ , ಮೇಲೆ ಐವತ್ ರುಪಾಯಿ ಕೊಡಿ " ಎಂದ . " ಇದು ಪ್ರೀಪೈಡ್ ಅಲ್ವಾ ? ಇರಿ ಕಂಪ್ಲೇಂಟ್ ಮಾಡ್ತೀನಿ " ಎಂದು ನಾನು ಮೊಬೈಲ್ ತೆಗೆದೆ .
" ಅಯ್ಯೋ ಮಾಡ್ಕಳಿ ಸಾರ್ , ಅಡ್ರೆಸ್ಸ್ ಹುಡ್ಕಕ್ಕೆ ಐದ್ ರೌಂಡ್ ಹೊಡೀಲಿಲ್ವ ? . ಅವ್ರು ಬರಿ ಫೋರ್ಥ್ ಟಿ ಬ್ಲಾಕ್ ಗೆ ರೇಟು ಫಿಕ್ಸ್ ಮಾಡಿದಾರೆ . ಸುಮ್ನೆ ಐವತ್ ರುಪಾಯಿ ಜಾಸ್ತಿ ಮಡ್ಗಿ ಹೋಗಿ " ಎಂದು ಆತ ತಿರುಗಿ ಬಿದ್ದ . ನಮ್ಮ ಗಲಾಟೆಗೆ ವಾಕ್ ಮಾಡುತ್ತಿದ್ದ ಒಂದಷ್ಟು ಧಡೂತಿ ಜನರು ತಿರುಗಿ ನೋಡತೊಡಗಿದರು . ನನಗೆ ಪರಮ ನಾಚಿಕೆಯಾಗಿ ಮರು ಮಾತಾಡದೆ ದುಡ್ಡು ಕೊಟ್ಟು ಬಂದೆ .
 ನನ್ನಂತೆಯೇ ಭವಿಷ್ಯ ಅರಸಿ ಬೆಂಗಳೂರಿಗೆ ಬಂದಿಳಿದ ಅದೆಷ್ಟೋ ಜನರನ್ನು ಬೆಂಗಳೂರು ನೋಡಿದೆ . ನನಗೆ ಬೆಂಗಳೂರು ಹೊಸದು , ಬೆಂಗಳೂರಿಗೆ ನನ್ನಂತವರು ಹಳಬರು .