2/9/15

ಹುಚ್ಗುದುರೆ ಭಾಗ-3

ದಕ್ಷಿಣ ಭಾರತದವರಿಗೆ 'ಲೇ' ಎಂಬ ಊರಿದೆ ಎಂದರೆ ನಕ್ಕೇ ಬಿಟ್ಟಾರು , ಅನು ಕೂಡ ಮೊದಲು ನಕ್ಕಿದ್ದಳೇನೋ ? . ಆದರೆ ಆಲ್ ಇಂಡಿಯಾ ಮೆಡಿಕಲ್ ಕೌನ್ಸಿಲ್ ಅವಳನ್ನು ಅಲ್ಲಿಗೆ ಕರೆಸಿತ್ತು . ಎಲ್ಲರೂ ಪರೀಕ್ಷೆ ಮುಗಿಸಿ ಮನೆಗೆ ಹೋಗುತ್ತಿದ್ದರೆ , ತಾನು ಕಾಣದ ಊರಿಗೆ ಹೋಗಬೇಕಲ್ಲ ಎಂದು ಸ್ವಲ್ಪ ಬೇಜಾರು ಆಗಿದ್ದು ನಿಜ . ಲೇ ಏನು ಹತ್ತಿರದ ಹಾದಿಯಂತು ಅಲ್ಲ . ಬೆಂಗಳೂರಿನಿಂದ ದಿಲ್ಲಿ ತಲುಪಿ ಅಲ್ಲಿಂದ ಶ್ರೀನಗರಕ್ಕೆ ಹೋಗಬೇಕು .
ಅನು  ಶ್ರೀನಗರದಲ್ಲಿ ಇಳಿದಾಗ ಅದಾಗಲೇ ಹತ್ತು ಗಂಟೆ , ಆದರೂ ಇಬ್ಬನಿ ಕರಗಿರಲಿಲ್ಲ . ಎಂತಹ ಸುಂದರ ಊರು !!. ಡಾಭಾದ ಮುಂದಿನ ಬೆಂಚ್ ಮೇಲೆ ಅನು ರೋಟಿ ,ದಾಲ್ ತಿನ್ನುತ್ತಿದಳು .
" What a pleasant surprise Anu , glad to see you here " ಎಂದಿತ್ತು ಆ ಆಕೃತಿ . ಅವನು ಆದಿ , ಮಂಗಳೂರು ಮೆಡಿಕಲ್ ಕಾಲೇಜ್ topper .
ಇಡೀ ಸ್ತ್ರೀ ಕುಲವನ್ನೇ ಸುಟ್ಟು ಬೂದಿ ಮಾಡುವಷ್ಟು ಜ್ವಾಜಲ್ಯಮಾನ್ಯ ಕಣ್ಣುಗಳು , ಆರಡಿ ಎತ್ತರದ ದೈತ್ಯ ದೇಹಿ . ಅಸಾಧ್ಯ ಬುದ್ದಿವಂತ . ಬಹುಶಃ ನೀವು ನೋಡಿದರೆ ನಿಮಗೂ ಆಕರ್ಷಣೆ ಹುಟ್ಟಿ ಬಿಟ್ಟೀತು !! .
"ಇಲ್ಲೇ ಲೇ ಅಲ್ಲಿ ಸೆಮಿನಾರ್ ಇದೆ , ನೀವೇನ್ ಇಲ್ಲಿ ? ".
" ನಾನು ಕಾಶ್ಮೀರಿ ಪಂಡಿತರ ವರ್ಗದವನು ನಮ್ಮ ಮೂಲ ಮನೆಯೆಲ್ಲಾ ಇರೋದು ಇಲ್ಲೇ , ಏನು ಇಲ್ಲೇ ಲೇ ಅಂತಾ ಇದ್ದೀರಾ ಇಲ್ಲಿಂದ ಎರಡು ತಾಸು ಬೇಕು ಲೇ ಗೆ ಹೋಗೋಕೆ "
"ಅಲ್ಲಿ ಭಾರಿ ಹಿಮಪಾತ ಆಗ್ತಾ ಇದೆಯಂತೆ ?".
" ಹೌದು ಅನು , ನೀವು ಹೊಸಬರು ಬೇರೆ , ನಿಮ್ಮನ್ನ ಒಬ್ರೇ ಕಳ್ಸೋಕೆ ಮನಸು ಬರ್ತಿಲ್ಲ , ನಡೀರಿ ನಾನು ಬರ್ತೀನಿ " .  ಎಂದವನೇ ಬಸ್ ಸ್ಟಾಂಡ್ ಕಡೆಗೆ ಹೆಜ್ಜೆ ಹಾಕತೊಡಗಿದ .  ಕಾಣದ ಊರಿನಲ್ಲಿ ಒಂಟಿಯಾಗಿ ತಿರುಗುವುದು ಸರಿಯಲ್ಲ ಎಂದು ಅವಳಿಗೂ ಅನಿಸಿರಬೇಕು , ಮರು ಮಾತಾಡದೆ ಹೊರಟಳು .
ಅಲ್ಲಿ ಅವಳಿಗೆ ಸ್ವರ್ಗ ಕಾದಿತ್ತು . ರಸ್ತೆಯ ಇಕ್ಕೆಲಗಳಲ್ಲೂ ಕೇಸರಿ ಹೂವುಗಳು , ಕೇಸರಿ ತಿಂದಿದ್ದಳೇ ಹೊರತು ಅದನ್ನು ನೋಡಿರಲಿಲ್ಲ . ಎದುರಿಗೆ ಹಿಮಚ್ಚಾದಿತ ಬೆಟ್ಟಗಳು , ' ದೇವ ಭೂಮಿ '  ಹಿಮಾಲಯ , ಎಂತಹ ಊರು ಲೇ !!! .
ಇಬ್ಬರೂ ಸೀದಾ ಒಂದು ಹೋಟೆಲಿಗೆ ಹೋದರು , ಆದಿಯ ಪರಿಚಿತರ ಹೋಟೆಲ್ ಇರಬೇಕು . ಒಂದು ರೂಮು ಸಿಕ್ಕಿತ್ತು . ಒಂದು ಮಂಚ , ದೊಡ್ಡ ಕಿಟಕಿ , ಎದುರಿಗೇ ಹಿಮಾಲಯ ಪರ್ವತಗಳು , ಸದಾ ಹಿಮಪಾತ , ಕಾನಿಸುತ್ತಿದರೂ ಏನೂ ಮಾಡಲಾರದ ಸೂರ್ಯ  , ಸ್ವರ್ಗವೆಂದರೆ ಅದೇನಾ ? .
" ಇನ್ನೊಂದು ನಾಲ್ಕು ದಿನ ಎಲ್ಲೂ ಹೊರಗೆ ಹೋಗಬೇಡಿ ಅನು , ಇಲ್ಲಿ ಆಮ್ಲಜನಕ ತುಂಬಾ ಕಡಿಮೆ ಇರುತ್ತೆ , ನೀವು ಆಕ್ಸ್ಲಾಮೇಟ್ ಆಗಬೇಕು , ಇಲ್ಲಿನ ಆಮ್ಲಜನಕದ ಲೆವೆಲ್ ಗೆ ನೀವು ಹೊಂದಿಕೊಳ್ಳಬೇಕು . ಆ ಬೆಂಕಿಯನ್ನು ಆರಿಸಬೇಡಿ , ಅದು ನಿಮ್ಮ ರೂಮನ್ನು ಬೆಚ್ಚಗಿಡುತ್ತೆ  , ಅದರ ಸೀಮೆ ಎಣ್ಣೆ ಖಾಲಿ ಆದರೆ ಹೋಟೆಲಿನಲ್ಲಿ ಕೇಳಿ . ನಾನು ಈಗ ಮನೆಗೆ ಹೋಗುತ್ತೇನೆ ". ಎಂದವನೇ ಅನುಳ ಉತ್ತರಕ್ಕೂ ಕಾಯದೇ ಹೊರಟು ಬಿಟ್ಟ .
ರಾತ್ರಿ ಮತ್ತೆ ಅದೇ ರೋಟಿ , ದಾಲ್ . ಕರೆಂಟ್ ಆಗಾಗ ತನ್ನ ಜೀವಂತಿಕೆಯನ್ನು ತೋರಿಸುತ್ತಿದ್ದು ಅಷ್ಟೇ . ರೂಂ ಬಾಯ್ ಹತ್ತಿರ ಬಿಸಿ ನೀರು ಕೇಳಿ ಪಡೆದು ಸ್ನಾನ ಮಾಡಿದಳು . ಸ್ನಾನವೆಂದರೆ ಕೇವಲ ಎರಡೇ ನಿಮಿಷ ಅಷ್ಟೇ , ಅದಕ್ಕೂ ಹೆಚ್ಚು ಹೊತ್ತು  ಬಟ್ಟೆ ಇಲ್ಲದೆ ನಿಂತರೆ ದೇಹ ಕೊರಡುಗಟ್ಟಿ ಹೋಗುವುದು ಖಂಡಿತ . ಆ ದಿನ ಹಾಗೆ ಮುಗಿದಿತ್ತು .
ಬೆಳಿಗ್ಗೆ ದೇಹ ತನ್ನ ಮಾತೇ ಕೇಳುತ್ತಿಲ್ಲ ಅನಿಸುತ್ತಿತ್ತು ಅನುವಿಗೆ , ಮೈಯೆಲ್ಲಾ ಮರಗಟ್ಟಿ ಹೋಗಿದೆ . ಅನಸ್ತೇಶಿಯಾ ಎಫೆಕ್ಟ್ ಆದ ಹಾಗೆ . ಯಾರನ್ನಾದರೂ ಕರೆಯ ಬೇಕು ಎನಿಸಿತು , ಎಲ್ಲಿ ಸ್ವರವೇ ಇಲ್ಲ !!. ಹಾಗೇ ಕಣ್ಣು ಮುಚ್ಚಿ ಬಿಟ್ಟಳು ಅನು . ವಿಶುವಿನ ಕನಸು ಕೂಡ ಕಣ್ಣು ಮುಚ್ಚಿದ್ದಿರಬಹುದು ......
" ಇದೇನು ಅನು , ಸೀಮೆ ಎಣ್ಣೆ ಖಾಲಿ ಆದ್ರೆ ಕೇಳಿ ಇಸ್ಕೋಳಿ ಅಂದಿದ್ದೆ  . ನಿಮ್ಮ ಮಂಗಳೂರು ಅಲ್ಲ ಇದು , ಇನ್ನೂ ಸ್ವಲ್ಪ ಹೊತ್ತು ಹಾಗೆ ಇದಿದ್ರೆ ನಿಮ್ಮ ಕಥೆ ಏನಾಗ್ತಿತ್ತು ಗೊತ್ತ ? . ಆ ರೂಂ ಬಾಯ್ ಗೂ ಬುದ್ಧಿ ಇಲ್ಲ , ಅವನಾದರೂ ರಾತ್ರಿ ಮಲಗುವಾಗ ಬೆಂಕಿ ಒಟ್ಟಿ ಮಲಗಬಹುದಿತ್ತು , ಛೆ ....... "
ಸ್ವರ್ಗದಂತೆ ಕಾಣುತ್ತಿದ್ದ ಲೇ ನಿಧಾನವಾಗಿ ತನ್ನ ನಿಜ ಸ್ವರೂಪ ಬಿಚ್ಚಿಡುತಿತ್ತು . ಅಲ್ಲಿ ಕಾಲ ಸ್ತಬ್ದವಾಗಿತ್ತು . ಗಜಿ- ಬಿಜಿ ಇಲ್ಲ , ಸದಾ ಮಾತನಾಡುವ ಜನರಿಲ್ಲ , ಎಲ್ಲವೂ ನಿರ್ಜೀವ , ಕೊರಡುಗಟ್ಟಿ ಹೋಗಿದೆ ಹಿಮದಂತೆ . ಅದಾಗಲೇ ಎರಡು ದಿನ ಕಳೆದಿತ್ತು , ಹೋಟೆಲಿನ ರೂಮು ಅಸಹನೀಯವಾಗುತ್ತಿತ್ತು .
" ಆದಿ ನಿಮ್ಮೂರು ತೋರುಸ್ತಿರಾ ? , ಈ ರೂಮು ಸಾಕು ಅನಿಸ್ತಾ ಇದೆ ".
ಇಬ್ಬರೂ ಹೊರಟರು .... ಅನು ಮಂಗಳೂರಿನಿಂದ ತಂದಿದ್ದ ಯಾವ ಜಾಕೆಟ್ ಗಳೂ ಅಲ್ಲಿನ ಚಳಿಗೆ ಲೆಕ್ಕವೇ ಇಲ್ಲ . ಆದಿಯೇ ಅವರ ಮನೆಯಿಂದ ಬಟ್ಟೆಗಳನ್ನು ತಂದಿದ್ದ .
ಹೊರಟು ಅದಾಗಲೇ ಹತ್ತು ನಿಮಿಷವಾಗಿತ್ತು , ಅನುಗೆ ಸುಸ್ತಾಗತೊಡಗಿತ್ತು . ಒಂದು ಹೆಜ್ಜೆಯೂ ಎತ್ತಿಡಲಾರದ ಸ್ಥಿತಿ . ಮೂರ್ಛೆ ಹೋದಂತ ಅನುಭವ . ಅನು ಕುಸಿದು ಬಿದ್ದಳು  . ಆ ಹಿಮದ ನಾಡಿನಲ್ಲಿ ವಾಹನವಾದರೂ ಎಲ್ಲಿ ಸಿಕ್ಕಿತೂ ? . ಆದಿಯೇ ಅವಳನ್ನು ಹೊತ್ತು ಬರಬೇಕಾಯಿತು .
" ನೀವಿನ್ನೂ ಆಕ್ಸ್ಲಾಮೇಟ್ ಆಗಿಲ್ಲ ಅನು ". ಅವಳ ಕಾಲು ಉಜ್ಜುತ್ತಾ ಆದಿ ಮಾತನಾಡುತ್ತಿದ್ದ  . ಇದೆಂತಹ ಊರು , ಸ್ವಲ್ಪ ಅಡ್ಡಾಡಿದರೆ ಜೀವಕ್ಕೆ ಅಪಾಯ ಬರುವ ಊರು .  ತಾನು ಮತ್ತೆ ವಿಶುವನ್ನು ನೋಡುತ್ತೆನಾ ಎನಿಸುತಿತ್ತು ಅನುಳಿಗೆ .
ಒಂದು ವಾರದ ನಂತರ ಎಲ್ಲವೂ ಅಭ್ಯಾಸ ಆಗತೊಡಗಿತ್ತು . ಒಂದೆರಡು ವಾಕ್ ಹೋದ ಮೇಲೆ , ಅವಳಿಗೆ ಕಾನ್ಫಿಡೆನ್ಸ್  ಬಂದಿತ್ತು  . ಮತ್ತೆ ಊರು ಸುತ್ತುವ ತಲುಬು ಬಂದಿತ್ತು . ಹಿಮಾಲಯವೇರಿ ಹೊರಟರು , ಕನಸುಗಳ ಹುಡುಕುತ್ತಾ . ಒಂದು ಅರ್ಧ ಬಿಟ್ಟ ಕನಸನ್ನು ಮರೆತು , ಇನ್ನೊಂದು ಕನಸ ಹುಡುಕಿ ಹೊರಟಿತ್ತು ಅವಳ ಯಾತ್ರೆ .
ಮತ್ತೆ ಅವಳಿಗೆ ಲೇ ಇಷ್ಟವಾಗಿದ್ದು ಊರು ಸುತ್ತುವಾಗಲೇ . ಇಲ್ಲಿ ಯಾರೂ ನನಗೆ ಅಡ್ಡಿಯಲ್ಲ . ಕೆಂಪು ಕಣ್ಣಿನ ಅಪ್ಪನ ಕರಿ ನೆರಳು ನನ್ನ ಹಿಂದೆ ಇಲ್ಲ . ಅನು ಮೊದಲ ಸ್ವಾತಂತ್ರ್ಯದ ಸವಿ ಸವಿಯುತ್ತಿದ್ದಳು .
"ಇದು ಹಿಮಾಲಯದ ಗುಹೆಗಳು , ಇಲ್ಲಿ ಸಾಧು ಸಂತರು ಇನ್ನೂ ಬದುಕಿದ್ದಾರೆ ಎಂದು ನಂಬಿಕೆ ಇದೆ ". ಎಂದು ಆದಿ ಅವಳಿಗೆ ತನ್ನ ಊರಿನ ಪರಿಚಯ ಮಾಡಿಸುತ್ತಿದ್ದ .
ಬೌಧ್ಧ ದೇವಾಲಯಗಳು ಸಾಲು ಸಾಲಾಗಿ ನಿಂತಿದ್ದವು . ಸದಾ ಮಂತ್ರ ಪಟನೆ ಮಾಡುವ ಬೌಧ್ಧ ಬಿಕ್ಷುಗಳು . ಆದಿ ಅವಳಿಗೆ Buddhisht prayer wheel ಕೊಡಿಸಿದ . ಅದರ ಮೇಲೆಲ್ಲಾ ಮಂತ್ರಗಳು ಇರುತ್ತವೆ , ಒಮ್ಮೆ ಅದನ್ನು ತಿರುಗಿಸದರೆ ಮಂತ್ರ ಪಟನೆ ಮಾಡಿದಷ್ಟು ಪುಣ್ಯ ಸಿಗುತ್ತದೆ ಎಂಬುದು ಅವರ ನಂಬಿಕೆ , ಆದಿ ಒಂದೇ ಸಮನೆ ಮಾತನಾಡುತ್ತಿದ್ದ .
ಅವರು ಈಗ ಲೇ ಊರಿನ ತುತ್ತತುದಿಯಲ್ಲಿ ನಿಂತಿದ್ದರು . ಸಮುದ್ರ ಮಟ್ಟದಿಂದ ಆರು ಸಾವಿರ ಅಡಿಗಳ ಎತ್ತರದಲ್ಲಿ . ಇಡೀ ವಿಶ್ವವನ್ನೇ ಗೆದ್ದ ಖುಷಿಯಲ್ಲಿ ಅನು ಇದ್ದಳು . ದಕ್ಷಿಣಕ್ಕೆ ಮುಖ ಮಾಡಿ ನಿತ್ತರೆ ಭಾರತ ಮಾತೆಯ ವಿಶ್ವರೂಪ ದರ್ಶನ .
ಇದ್ದಕ್ಕಿದಂತೆ ನಿಂತ ನೆಲ ಕುಸಿದಂತೆ ಭಾಸವಾಗುತಿತ್ತು . ಅನು ಆಯ ತಪ್ಪಿ ಪ್ರಪಾತಕ್ಕೆ ಬಿದ್ದೇ ಬಿಡುತ್ತಿದಳು . ಕ್ಷಣದಲ್ಲೇ ಆದಿ ಅವಳನ್ನು  ಸುಲಭವಾಗಿ ಎತ್ತಿ ನಿಲಿಸಿದ್ದ .
" ಏನ್ ಅನು ನೀನು , ಇದು ಹುಡುಗಾಟ ಅಲ್ಲ .   ಇದು ಮಂಗಳೂರು ಅಲ್ಲ , ಇಲ್ಲಿ ಹೆಜ್ಜೆಗೂ ಅಪಾಯ ಕಾದಿರುತ್ತೆ " . ಅವನ ಮಾತುಗಳಲ್ಲಿ ಕೋಪವಿತ್ತು , ಕಾಳಜಿಯಿತ್ತು . ಪ್ರೀತಿ ಇತ್ತಾ ?
ಮೊದಲ ಬಾರಿಗೆ ಆದಿ ಅವರ ಮನೆಗೆ ಕರೆದು ಕೊಂಡು ಹೋಗಿದ್ದ . ಬಹಳ ಚಿಕ್ಕ ಮನೆ . ಒಂದು ತಂಗಿ , ಅಮ್ಮ , ಅಪ್ಪ ಹೋಗಿ ಎಷ್ಟೋ ವರ್ಷ ಆಗಿದೆಯಂತೆ . ಎಷ್ಟು ಚೆಂದವಿತ್ತು ಅವರ ಸಂಸಾರ .
ಮತ್ತೆ ರಾತ್ರಿ ಆಗಿತ್ತು ಎಂದಿನಂತೆ , ಆದಿಯ ಅಮ್ಮನೇ ರೋಟಿ ಬಡಿಸಿದರು .
ಒಮ್ಮೊಮ್ಮೆ ಕಾಲ ಏನೆಲ್ಲಾ ಮಾಡುತ್ತ ಹೋಗುತ್ತದೆ , ಲೇ ಎಲ್ಲಿ , ಮಂಗಳೂರು ಎಲ್ಲಿ . ಈತ ಭವಿಷ್ಯ ಅರಸಿ ಅಷ್ಟು ದೂರ ತನ್ನವರನ್ನು ಬಿಟ್ಟು ಬರಬೇಕು , ಎಂತಹ ವಿಧಿ ಎಂದು ಅನು ಕಾಲಕ್ಕೆ ಶಾಪ ಹಾಕುತ್ತಿದ್ದಳು .
ಹೋಟೆಲ್ ಬಂದೇ ಬಿಟ್ಟಿತ್ತು ..............
" ನಾನು ನಾಳೆ ಹೊರಡುತ್ತೇನೆ , thank you ಆದಿ , ನೀನಿಲ್ಲದೆ ನಾನು ಇಲ್ಲಿ ಒಂಟಿ ಆಗಿ ಬಿಡುತ್ತಿದ್ದೆ . Thank you very much ".
ಆದಿ ಅವಳನ್ನು ತಬ್ಬಿ ಗಾಳಿಗೇನೋ ಎನ್ನುವಂತೆ ಮುತ್ತಿಟ್ಟ . ಕಣ್ಣ ತುದಿಯಲ್ಲಿ ನೀರು . ಅನು ಒಬ್ಬಳೇ ಅಳತೊಡಗಿದಳು
ಕುವೆಂಪು ನಗರದ ರೂಮಿನಲ್ಲಿ ಅರ್ಧಕ್ಕೇ ಉಳಿದು ಹೋದ ಕನಸೊಂದು ಕನಲಿತ್ತು
 ' ಅನು ..................................................' ಎಂದು .

(ಮುಂದುವರೆಯುವುದು ............)
   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ