22/9/15

ಹುಚ್ಗುದುರೆ -ಭಾಗ 5

ನೀವಾದರೂ ಅನು ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದಿರಿ ? . ಇಬ್ಬರು ನಿಮ್ಮನ್ನು ಸಮವಾಗಿ ಪ್ರೀತಿಸಿದರೆ ನೀವು ಯಾರನ್ನು ಆಯ್ದು ಕೊಳ್ಳುತ್ತೀರಿ ? . ಅಕ್ಷರಶಃ ಅನು ಅಡಕತ್ತರಿಯಲ್ಲಿ ಸಿಲುಕಿ ಕೊಂಡಿದ್ದಳು . ಭೂತಭವಿಷಧ್ತ್ವರ್ತಮಾನಗಳ ಪರಿವಿಯೇ ಇಲ್ಲದೇ ದಿನ ಕಳೆಯುವಳು . ಊಟ-ನಿದ್ದೆಗಳ ಕಡೆಗೆ ಗಮನವೇ ಇಲ್ಲ . ದಿನದ ಮುಕ್ಕಾಲು ಭಾಗ ಒಂಟಿಯಾಗಿ ಕಳೆಯುವಳು , ಗಂಟೆಗಟ್ಟಲೇ ಶೂನ್ಯವನ್ನು ದಿಟ್ಟಿಸುತ್ತಾ ನಿಂತುಬಿಡುವಳು . ಮತ್ತದೇ ಹಳೆಯ ಪ್ರಶ್ನೆ, "ಪ್ರೀತಿ ಎಂದರೇನು ?" . ಉತ್ತರವಿಲ್ಲದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡುವಳು .  ಇಲ್ಲ ,ಏನೂ ಇಲ್ಲ , ತನಗೆ ಯಾರೂ ಇಲ್ಲ , ಒಮ್ಮೆ ಯೋಚಿಸುವಳು . ಮರೆಯಲ್ಲಿ ಬಿಕ್ಕುವಳು . ಒಮ್ಮೆಗೆ ಸಾವಿನ ಯೋಚನೆ ಬರುವುದು ಸುಳ್ಳಲ್ಲ , ಆದರೆ ತಾನು ತನ್ನ ಜೊತೆಗೆ ವಿಶುವನ್ನೂ  ಸಾವಿನ ಬಾವಿಗೆ ತಳ್ಳುತ್ತೇನೆ ಎಂದು ಯೋಚನೆ ಕೈ ಬಿಡುವಳು . ಅವಳಾದರೂ ಏನು ತಾನೇ ಮಾಡಿಯಾಳು ? .
ಜೀವನ ಯಾಂತ್ರಿಕವಾಗಿ ಸಾಗುತಿತ್ತು . ಆಕೆ  ಓದಿದಳು , ಕೇವಲ ಪಾಸಾಗಲಿಲ್ಲ , ಮೊದಲಿಗಳಾದಳು . ಆದರೆ ಜೀವನ ? .
ಅದೊಮ್ಮೆ ಬೆಳಿಗ್ಗೆ ಆಕೆ ಕಾಲೇಜಿಗೆ ಹೊರಟಿದ್ದಳು . ಬಿಳಿಯ ಸಲ್ವಾರ್ ತೊಟ್ಟು ದೇವತೆಯಂತೆ ಕಾಣುತ್ತಿದಳು ಎಂದು ಹೇಳ ಬೇಕಿಲ್ಲ ತಾನೇ ? .
ಅದಾಗಲೇ ಆದಿ ವೈಟಿಂಗ್ ರೂಮಿನಲ್ಲಿ ಕುಳಿತು ಬಿಟ್ಟಿದ್ದ . ಅನು ಬೆಚ್ಚಿ ಹೋದಳು ,
" ಯಾಕೋ ನಿಮ್ಮನ್ನ ನೋಡ್ಬೇಕು ಅನುಸ್ತು ಅದ್ಕೆ ಬಂದೆ ".
ಅವನ ಉರಿಯುತ್ತಿದ್ದ ಕಣ್ಣುಗಳೇ ಹೇಳುತಿತ್ತು , ಅವನು ರಾತ್ರಿ ಒಂದು ಕ್ಷಣವೂ ಕಣ್ಣು ಮುಚ್ಚಿಲ್ಲ ಎಂದು . ಅನು ಕೇವಲ ತೋರ್ಪಡಿಕೆಗೆ ಎಂಬಂತೆ ಮಾತನಾಡಿಸಿ ಕಳುಹಿಸಿ ಬಿಟ್ಟಳು . ಆದರೆ ತಕ್ಷಣವೇ ಒಂದು ನಿರ್ಧಾರಕ್ಕೆ ಬಂದಿದ್ದಳು .
ಇದನ್ನೆಲ್ಲಾ ವಿಶುವಿಗೆ ಹೇಳಬೇಕು , ಅವನೇ  ಇದಕ್ಕೆಲ್ಲಾ ಪರಿಹಾರ ನೀಡಬಲ್ಲ . ಆತ ದೇವರು , ದೇವರು ಮುನಿಸಿಕೊಳ್ಳುವುದಿಲ್ಲ ತನ್ನನ್ನು ಕ್ಷಮಿಸುತ್ತಾನೆ ಎಂದುಕೊಂಡೇ ಆಕೆ ಸುಧೀರ್ಘವಾದ ಮೇಲ್ ಟೈಪಿಸಿ ವಿಶುವಿಗೆ ಕಳುಹಿಸಿದಳು .
ಆದರೆ ವಿಶು ದೇವರಲ್ಲ ಅವನೂ ಎಲ್ಲರಂತೆ ಮನುಷ್ಯ . ಆತನಿಗೂ ನಿಮ್ಮಂತೆಯೇ ಒಂದು ಪುಟ್ಟ ಹೃದಯವಿದೆ . ಅದರಲ್ಲಿ ಕಾಮ , ಕ್ರೋಧ , ಮದ , ಮಾತ್ಸರ್ಯವಿಲ್ಲ ಕೇವಲ ನವಿರಾದ ಪ್ರೀತಿಯಿದೆ . ಆದರೆ ಹೆಬ್ಬಂಡೆಯಂತಹ ವಿಶುವಿಗೆ ಕೂಡ ಆಘಾತವಾಗಿತ್ತು . ಮೇಲ್ ಓದುತ್ತಾ ಓದುತ್ತಾ ಅವನ ಶಕ್ತಿ ಕುಂದಿ ಹೋಗುತಿತ್ತು . ಯಾವುದನ್ನು ಆತ ಕನಸಿನಲ್ಲಿಯೂ ಯೋಚಿಸಿರಲಿಲ್ಲವೋ ಅದು ವಾಸ್ತವವಾಗುತಿತ್ತು . ತಕ್ಷಣವೇ ಆತ ತಲೆ ಕೊಡವಿಕೊಂಡು ಎದ್ದ .
"ಸುಮ್ಮನೆ ಇರು ಅನು , ಈ ತರ ಎಲ್ಲ ತಮಾಷೆ ಮಾಡ್ಬಾರ್ದು " ಎಂದಷ್ಟೇ ಪ್ರತಿಕ್ರಿಯಿಸಿದ .
ಇತ್ತ ಅನು ತೀರಾ disturbed ಆಗಿ ಹೋದಳು . ತಾನು ಅವನನ್ನು ಬಿಟ್ಟು ಹೋಗುವುದನ್ನು ಆತ ಕಲ್ಪನೆ ಕೂಡ ಮಾಡಿಕೊಳ್ಳಲಾರ . ಮುಂದಿನ ಕಥೆ ಏನು ಎಂದು ತಿಳಿಯದೆ ಅನು ತಲೆ ಮೇಲೆ ಕೈ ಹೊತ್ತು ಕೂತಳು . 'ಲೇ' ಯ ಹಿಮ ಕರಗುತ್ತಿತ್ತು .....................................................

                                                                                     (ಮುಂದುವರೆಯುವುದು .........................)

 

11/9/15

ಹುಚ್ಗುದುರೆ ಭಾಗ -4

ರಾತ್ರೋ ರಾತ್ರಿ ಅನು ಮೈಸೂರಿಗೆ ಹೊರಟು ನಿಂತಿದ್ದಳು . ತನಗೆ ಏನಾಗುತ್ತಿದೆಯೆಂಬ ಕಲ್ಪನೆಯೂ ಅವಳಿಗೆ ಇರಲಿಲ್ಲ . ಜೀವದ  ಗೆಳೆಯನನ್ನು ಆಯ್ಕೆ ಮಾಡಿಕೊಳ್ಳಲೋ ? ಅಥವಾ ಜೀವ ಉಳಿಸಿದ ಗೆಳೆಯನನ್ನು ಆಯ್ದುಕೊಳ್ಳಲೋ ? .  ಆದರೆ ಆ ರೀತಿ ಒಬ್ಬರನ್ನೇ ಆರಿಸಿ ಕೊಂಡರೆ ಉಳಿದವನ ಗತಿ ಏನಾಗಬಹುದು ? . ತಾನು ಯಾರನ್ನು ಆರಿಸಿಕೊಂಡರೂ ಉಳಿದವನು ಸತ್ತಂತೆಯೇ ಸರಿ . ತಾನು ಯಾರ ಬಳಿ ಇದ್ದರೂ ತನ್ನ ಸಾವು ಖಚಿತ , ಇನ್ನೊಂದು ಜೀವಕ್ಕೆ ಮೋಸ ಮಾಡಿದ ಶಾಪದಲ್ಲಿ ಬೆಂದು ಹೋಗುವುದು ಖಂಡಿತ .
ಈ ಪ್ರೀತಿ ಜಗತ್ತಿನಲ್ಲಿ ಯಾರನ್ನೂ ಬಿಟ್ಟಿಲ್ಲವೇನೋ ? . ಇನ್ನೇನು ಎಲ್ಲ ಮುಗಿದು ಸರಿಯಾಯಿತು ಎನ್ನುವಷ್ಟರಲ್ಲಿ , ಮತ್ತೆ ಮನೆಯ ಮುಂದೆ ತಟ್ಟೆ ಹಿಡಿದು ಬರುವ ಭಿಕ್ಷುಕನಂತೆ ಮತ್ತೆ ಪ್ರತ್ಯಕ್ಷವಾಗುತ್ತದೆ . ಇಷ್ಟಕ್ಕೂ ಪ್ರೀತಿ ಎಂದರೇನು ? . ಯಾವುದೋ ವ್ಯಕ್ತಿ ನಮ್ಮೆದುರು ಬಂದಾಗ oxytocin ಉತ್ಪತ್ತಿಯಾಗುವ ಕೇವಲ ಜೈವಿಕ ಕ್ರಿಯೆಯೇ ? . ಕೇವಲ ಹಾರ್ಮೋನುಗಳ ವ್ಯತ್ಯಾಸವೇ ಪ್ರೀತಿಯೇ ? ಹಾಗಾದರೆ ಅನಾಸಿನ್ ಮಾತ್ರೆ ಇಂದ ಹಿಡಿದು ಫ್ಯಾನಿಗೆ ನೇತು ಹಾಕಿಕೊಳ್ಳುವಷ್ಟರ ಮಟ್ಟಿಗೆ ಈ ಪ್ರೀತಿ ಏಕೆ ನಮ್ಮನ್ನು ಕಾಡುತ್ತದೆ ? .ಏನೇನೋ ಯೋಚಿಸುತ್ತಿದ್ದಳು ಅನು .
ಬಸ್ ನಿಂದ ಇಳಿದು ನಡೆದೇ ಬಂದು ಬಿಟ್ಟಿದ್ದಳು . ಮತ್ತದೇ ಪ್ರಶ್ನೆ ಹೊತ್ತು ಬಂದಿದ್ದಳು ' ಯಾರನ್ನು ಆಯ್ದುಕೊಳ್ಳಲಿ ?' .
ಮಗು ತಾಯಿಯ ಬಳಿ ಬಂದಂತೆ ವಿಶುನ ಹತ್ತಿರ ಬಂದಿದ್ದಳು .
"ಬಾ ಅನು " ಅವನದು ಅದೇ ಧೃಡ ಧ್ವನಿ . ಒಂಚೂರು ಭಾವನೆಗಳನ್ನು ಹರಿಯ ಬಿಡುವವನಲ್ಲ .  ಪಕ್ಕದಲ್ಲಿ ರಿಯಾ ಕುಳಿತಿದ್ದಳು . ರೂಮಿನ ತುಂಬೆಲ್ಲಾ ಪುಸ್ತಕಗಳಿಂದ ತುಂಬಿ ಹೋಗಿತ್ತು . ಅವನು ಅಕ್ಷರಶಃ ಸನ್ಯಾಸಿಯಂತೆ ಬದುಕುತಿದ್ದ .
"ನಾನು ತಿಂಡಿ ತರ್ತೀನಿ ಇರು " ಎಂದು ಅವನು ರಿಯಾಳ ಕಾರಿನ ಕೀ ಎತ್ತಿಕೊಂಡು ಹೊರಟ . ರೂಮಿನಲ್ಲಿ ರಿಯಾ ,ಅನು ಇಬ್ಬರೇ ಉಳಿದರು .
"You know Anu ,ನೀವು ತುಂಬಾ lucky ,ಯಾವಾಗ್ಲೂ ಅವನು ನಿಮ್ಮ ಬಗ್ಗೆ ಯೋಚ್ನೆ ಮಾಡ್ತಾ ಇರ್ತಾನೆ . ನಾನು ಯಾವತ್ತೂ ಗಂಡಸರನ್ನ ಗೌರವದಿಂದ ನೋಡಿದವಳೇ ಅಲ್ಲ , I wanted to become a whore . ನನ್ನ ಮುಂದೆ ಗಂಡಸರು ತಲೆ ತಗ್ಗಿಸಿ ನಿಲ್ಲಬೇಕು , ಸುಳ್ಳಿನ ಬಟ್ಟೆ ಕಳಚಿಟ್ಟು ನನ್ನ ಮುಂದೆ ಅವರು ಬೆತ್ತಲಾಗಬೇಕು  " ಎಂದು ಅವಳು ಮಾತನಾಡುತ್ತಿದ್ದರೆ ಅನು ಅವಳನ್ನು ಅಚ್ಚರಿಯಿಂದ ನೋಡುತ್ತಿದ್ದಳು . ಸ್ಥಿತಿವಂತರ ಮನೆಯ ಹುಡುಗಿ ವೇಶ್ಯೆಯಾಗುವುದು ಎಂದರೆ ತಮಾಷೆಯೇ  ? .
ಕತ್ತಲಾವರಿಸುತಿತ್ತು , ಮನೆಯ ಹೊರಗೆ , ಮನಸಿನ ಒಳಗೆ . ಅನು ಮತ್ತು ವಿಶು ಸುಮ್ಮನೆ ಆಕಾಶವನ್ನು ದಿಟ್ಟಿಸುತ್ತಾ ಟೆರೇಸಿನ ಮೇಲೆ ಕುಳಿತ್ತಿದ್ದರು . ವಿಶು ಹೆಬ್ಬಂಡೆಯಾಗಿದ್ದರೆ , ಅನು ಬಳ್ಳಿಯಾಗಿದ್ದಳು . ತಾನು ಯಾರಿಗೆ ವಂಚಿಸುತ್ತಿದ್ದೇನೆ ? ಆದಿಗಾ ?ವಿಶುವಿಗಾ ? ಅಥವಾ ತನ್ನನೇ ವಂಚಿಸಿಕೊಳ್ಳುತ್ತಿದ್ದಳಾ ?
ತಬ್ಬಿ ಬಿಡು ಗೆಳೆಯ
ಇದೆಲ್ಲಾ ನಿನ್ನದೇ
ಆವರಿಸಿ ಬಿಡು
ಮೈ ಮನವ.

ಎನ್ನ ಮನದ ಕೊಚ್ಚೆಯ ತೊಡೆದು ಬಿಡು
ನಿನ್ನ ಪ್ರೀತಿಯ ಹುಚ್ಚು ಕೋಡಿಯಲ್ಲಿ
ಮುಳುಗಿಸಿಬಿಡು
ಮತ್ತೆ ಏಳದಂತೆ !.

ಎಂದವಳು ಹತ್ತಿರ ಬರುತ್ತಿದರೆ, ವಿಶುವಿನ ಹೃದಯದಲ್ಲಿ ತಲ್ಲಣ ಶುರುವಾಗುತ್ತಿತ್ತು . ಮೊದಲ ಹೆಣ್ಣಿನ ಸ್ಪರ್ಶವದು . ಒಂದು ಕ್ಷಣ ಎಲ್ಲಿ ತಾನು ಮೈ ಮರೆತು ಬಿಡುತ್ತೆನೆಯೋ ಎಂದು ಕೊಸರಿದ . ಆದರೂ ಏನದು ತಲ್ಲಣ ಎಂದು ಅರ್ಥವಾಗಲಿಲ್ಲ .
ಕಾದ ದೇಹಕ್ಕೆ
ಸಿಕ್ಕ ಅವಕಾಶ
ಬಿಸ್ತರದ ಚಿತೆ ಮೇಲೆ
ದೇಹಗಳ ಕಾದಾಟ
ಮನಕ್ಕಂಟಿದ  ವಾಂಛೆಯಾ ಹೊಯ್ದಾಟ
ಏನೀ ಹೋರಾಟ ?
ಅವನು ಮೇಲೋ , ಅವಳು ಮೇಲೋ
ಅಥವಾ ಸಮಬಲವೊ ?
ಅವಳ ಉಸಿರ ಘಮ
ಇವನ ಬೆವೆರ ಪುನುಖು
ಮುಗಿಯದ ಇರುಳು
ಸರಿದ ಮುಂಗುರುಳು
ನಗುತಿದ್ದ ಅವಳ ಮುಖ
ಸಂತಸವೋ ? ದುಃಖವೋ ?
ಶೃತಿ ತಪ್ಪುವ ವೀಣೆ
ಹರಿದು ಹೋದ ತಂತಿ
ಹೊಲಿದು ಕೊಡುವವರ್ಯಾರು ?

ಇಲ್ಲ ವಿಶು ಹೆಬ್ಬಂಡೆ , ಲೇ ಊರಿನ ಹಿಮವಿದ್ದಂತೆ ,ಅವನು ಕರಗಲಾರ .  ನಿರ್ನಿದ್ದೆಯಲ್ಲೂ ತಪ್ಪು ಮಾಡಲಾರ . ಅವನಿಗೇನು ಗೊತ್ತು ಮುಂದೆ ಅದೇ ದೊಡ್ಡ ಪ್ರಮಾದ ಆಗುವುದೆಂದು . ತಲೆ ಕೊಡವಿ ಮೇಲೆದ್ದ .

"ಏನದು ಒಳಗೆ ಹೋಗು ವೇಲು ಹಾಕಿಕೋ " ಕೂಗಿದ್ದ ಕೆಂಪು ಕಣ್ಣಿನ ಅಪ್ಪ .
ಒಳಗೆ ಬಂದ ಅನು , ತನ್ನಪ್ಪ ಗಮನಿಸಿದ್ದು ಏನನ್ನು ಎಂದು  ನೆನೆ -ನೆನೆದು ಅನು ನೀರಾಗಿದ್ದಳು . ಆ ಕ್ಷಣಕ್ಕೆ ಏನಕ್ಕೋ ಕೆಂಪು ಕಣ್ಣಿನ ಅಪ್ಪ ಅವಳಿಗೆ ನೆನಪಾಗಿದ್ದ .
ಹಾಗೆ ಮುಗಿದಿತ್ತು ಆ ರಾತ್ರಿ . ........
ಬೆಳಿಗ್ಗೆ ಆ ರೂಮಿನಲ್ಲಿ ಎರಡು ಧ್ವನಿ ಕೇಳುತಿತ್ತು
"ವಕ್ರ ತುಂಡ ಮಹಾಕಾಯ ಕೋಟಿ ಸೂರ್ಯ ಸಮ ಪ್ರಭಾ ............... "
                                                                                                 (ಮುಂದುವರೆಯುವುದು........... )


 




2/9/15

ಹುಚ್ಗುದುರೆ ಭಾಗ-3

ದಕ್ಷಿಣ ಭಾರತದವರಿಗೆ 'ಲೇ' ಎಂಬ ಊರಿದೆ ಎಂದರೆ ನಕ್ಕೇ ಬಿಟ್ಟಾರು , ಅನು ಕೂಡ ಮೊದಲು ನಕ್ಕಿದ್ದಳೇನೋ ? . ಆದರೆ ಆಲ್ ಇಂಡಿಯಾ ಮೆಡಿಕಲ್ ಕೌನ್ಸಿಲ್ ಅವಳನ್ನು ಅಲ್ಲಿಗೆ ಕರೆಸಿತ್ತು . ಎಲ್ಲರೂ ಪರೀಕ್ಷೆ ಮುಗಿಸಿ ಮನೆಗೆ ಹೋಗುತ್ತಿದ್ದರೆ , ತಾನು ಕಾಣದ ಊರಿಗೆ ಹೋಗಬೇಕಲ್ಲ ಎಂದು ಸ್ವಲ್ಪ ಬೇಜಾರು ಆಗಿದ್ದು ನಿಜ . ಲೇ ಏನು ಹತ್ತಿರದ ಹಾದಿಯಂತು ಅಲ್ಲ . ಬೆಂಗಳೂರಿನಿಂದ ದಿಲ್ಲಿ ತಲುಪಿ ಅಲ್ಲಿಂದ ಶ್ರೀನಗರಕ್ಕೆ ಹೋಗಬೇಕು .
ಅನು  ಶ್ರೀನಗರದಲ್ಲಿ ಇಳಿದಾಗ ಅದಾಗಲೇ ಹತ್ತು ಗಂಟೆ , ಆದರೂ ಇಬ್ಬನಿ ಕರಗಿರಲಿಲ್ಲ . ಎಂತಹ ಸುಂದರ ಊರು !!. ಡಾಭಾದ ಮುಂದಿನ ಬೆಂಚ್ ಮೇಲೆ ಅನು ರೋಟಿ ,ದಾಲ್ ತಿನ್ನುತ್ತಿದಳು .
" What a pleasant surprise Anu , glad to see you here " ಎಂದಿತ್ತು ಆ ಆಕೃತಿ . ಅವನು ಆದಿ , ಮಂಗಳೂರು ಮೆಡಿಕಲ್ ಕಾಲೇಜ್ topper .
ಇಡೀ ಸ್ತ್ರೀ ಕುಲವನ್ನೇ ಸುಟ್ಟು ಬೂದಿ ಮಾಡುವಷ್ಟು ಜ್ವಾಜಲ್ಯಮಾನ್ಯ ಕಣ್ಣುಗಳು , ಆರಡಿ ಎತ್ತರದ ದೈತ್ಯ ದೇಹಿ . ಅಸಾಧ್ಯ ಬುದ್ದಿವಂತ . ಬಹುಶಃ ನೀವು ನೋಡಿದರೆ ನಿಮಗೂ ಆಕರ್ಷಣೆ ಹುಟ್ಟಿ ಬಿಟ್ಟೀತು !! .
"ಇಲ್ಲೇ ಲೇ ಅಲ್ಲಿ ಸೆಮಿನಾರ್ ಇದೆ , ನೀವೇನ್ ಇಲ್ಲಿ ? ".
" ನಾನು ಕಾಶ್ಮೀರಿ ಪಂಡಿತರ ವರ್ಗದವನು ನಮ್ಮ ಮೂಲ ಮನೆಯೆಲ್ಲಾ ಇರೋದು ಇಲ್ಲೇ , ಏನು ಇಲ್ಲೇ ಲೇ ಅಂತಾ ಇದ್ದೀರಾ ಇಲ್ಲಿಂದ ಎರಡು ತಾಸು ಬೇಕು ಲೇ ಗೆ ಹೋಗೋಕೆ "
"ಅಲ್ಲಿ ಭಾರಿ ಹಿಮಪಾತ ಆಗ್ತಾ ಇದೆಯಂತೆ ?".
" ಹೌದು ಅನು , ನೀವು ಹೊಸಬರು ಬೇರೆ , ನಿಮ್ಮನ್ನ ಒಬ್ರೇ ಕಳ್ಸೋಕೆ ಮನಸು ಬರ್ತಿಲ್ಲ , ನಡೀರಿ ನಾನು ಬರ್ತೀನಿ " .  ಎಂದವನೇ ಬಸ್ ಸ್ಟಾಂಡ್ ಕಡೆಗೆ ಹೆಜ್ಜೆ ಹಾಕತೊಡಗಿದ .  ಕಾಣದ ಊರಿನಲ್ಲಿ ಒಂಟಿಯಾಗಿ ತಿರುಗುವುದು ಸರಿಯಲ್ಲ ಎಂದು ಅವಳಿಗೂ ಅನಿಸಿರಬೇಕು , ಮರು ಮಾತಾಡದೆ ಹೊರಟಳು .
ಅಲ್ಲಿ ಅವಳಿಗೆ ಸ್ವರ್ಗ ಕಾದಿತ್ತು . ರಸ್ತೆಯ ಇಕ್ಕೆಲಗಳಲ್ಲೂ ಕೇಸರಿ ಹೂವುಗಳು , ಕೇಸರಿ ತಿಂದಿದ್ದಳೇ ಹೊರತು ಅದನ್ನು ನೋಡಿರಲಿಲ್ಲ . ಎದುರಿಗೆ ಹಿಮಚ್ಚಾದಿತ ಬೆಟ್ಟಗಳು , ' ದೇವ ಭೂಮಿ '  ಹಿಮಾಲಯ , ಎಂತಹ ಊರು ಲೇ !!! .
ಇಬ್ಬರೂ ಸೀದಾ ಒಂದು ಹೋಟೆಲಿಗೆ ಹೋದರು , ಆದಿಯ ಪರಿಚಿತರ ಹೋಟೆಲ್ ಇರಬೇಕು . ಒಂದು ರೂಮು ಸಿಕ್ಕಿತ್ತು . ಒಂದು ಮಂಚ , ದೊಡ್ಡ ಕಿಟಕಿ , ಎದುರಿಗೇ ಹಿಮಾಲಯ ಪರ್ವತಗಳು , ಸದಾ ಹಿಮಪಾತ , ಕಾನಿಸುತ್ತಿದರೂ ಏನೂ ಮಾಡಲಾರದ ಸೂರ್ಯ  , ಸ್ವರ್ಗವೆಂದರೆ ಅದೇನಾ ? .
" ಇನ್ನೊಂದು ನಾಲ್ಕು ದಿನ ಎಲ್ಲೂ ಹೊರಗೆ ಹೋಗಬೇಡಿ ಅನು , ಇಲ್ಲಿ ಆಮ್ಲಜನಕ ತುಂಬಾ ಕಡಿಮೆ ಇರುತ್ತೆ , ನೀವು ಆಕ್ಸ್ಲಾಮೇಟ್ ಆಗಬೇಕು , ಇಲ್ಲಿನ ಆಮ್ಲಜನಕದ ಲೆವೆಲ್ ಗೆ ನೀವು ಹೊಂದಿಕೊಳ್ಳಬೇಕು . ಆ ಬೆಂಕಿಯನ್ನು ಆರಿಸಬೇಡಿ , ಅದು ನಿಮ್ಮ ರೂಮನ್ನು ಬೆಚ್ಚಗಿಡುತ್ತೆ  , ಅದರ ಸೀಮೆ ಎಣ್ಣೆ ಖಾಲಿ ಆದರೆ ಹೋಟೆಲಿನಲ್ಲಿ ಕೇಳಿ . ನಾನು ಈಗ ಮನೆಗೆ ಹೋಗುತ್ತೇನೆ ". ಎಂದವನೇ ಅನುಳ ಉತ್ತರಕ್ಕೂ ಕಾಯದೇ ಹೊರಟು ಬಿಟ್ಟ .
ರಾತ್ರಿ ಮತ್ತೆ ಅದೇ ರೋಟಿ , ದಾಲ್ . ಕರೆಂಟ್ ಆಗಾಗ ತನ್ನ ಜೀವಂತಿಕೆಯನ್ನು ತೋರಿಸುತ್ತಿದ್ದು ಅಷ್ಟೇ . ರೂಂ ಬಾಯ್ ಹತ್ತಿರ ಬಿಸಿ ನೀರು ಕೇಳಿ ಪಡೆದು ಸ್ನಾನ ಮಾಡಿದಳು . ಸ್ನಾನವೆಂದರೆ ಕೇವಲ ಎರಡೇ ನಿಮಿಷ ಅಷ್ಟೇ , ಅದಕ್ಕೂ ಹೆಚ್ಚು ಹೊತ್ತು  ಬಟ್ಟೆ ಇಲ್ಲದೆ ನಿಂತರೆ ದೇಹ ಕೊರಡುಗಟ್ಟಿ ಹೋಗುವುದು ಖಂಡಿತ . ಆ ದಿನ ಹಾಗೆ ಮುಗಿದಿತ್ತು .
ಬೆಳಿಗ್ಗೆ ದೇಹ ತನ್ನ ಮಾತೇ ಕೇಳುತ್ತಿಲ್ಲ ಅನಿಸುತ್ತಿತ್ತು ಅನುವಿಗೆ , ಮೈಯೆಲ್ಲಾ ಮರಗಟ್ಟಿ ಹೋಗಿದೆ . ಅನಸ್ತೇಶಿಯಾ ಎಫೆಕ್ಟ್ ಆದ ಹಾಗೆ . ಯಾರನ್ನಾದರೂ ಕರೆಯ ಬೇಕು ಎನಿಸಿತು , ಎಲ್ಲಿ ಸ್ವರವೇ ಇಲ್ಲ !!. ಹಾಗೇ ಕಣ್ಣು ಮುಚ್ಚಿ ಬಿಟ್ಟಳು ಅನು . ವಿಶುವಿನ ಕನಸು ಕೂಡ ಕಣ್ಣು ಮುಚ್ಚಿದ್ದಿರಬಹುದು ......
" ಇದೇನು ಅನು , ಸೀಮೆ ಎಣ್ಣೆ ಖಾಲಿ ಆದ್ರೆ ಕೇಳಿ ಇಸ್ಕೋಳಿ ಅಂದಿದ್ದೆ  . ನಿಮ್ಮ ಮಂಗಳೂರು ಅಲ್ಲ ಇದು , ಇನ್ನೂ ಸ್ವಲ್ಪ ಹೊತ್ತು ಹಾಗೆ ಇದಿದ್ರೆ ನಿಮ್ಮ ಕಥೆ ಏನಾಗ್ತಿತ್ತು ಗೊತ್ತ ? . ಆ ರೂಂ ಬಾಯ್ ಗೂ ಬುದ್ಧಿ ಇಲ್ಲ , ಅವನಾದರೂ ರಾತ್ರಿ ಮಲಗುವಾಗ ಬೆಂಕಿ ಒಟ್ಟಿ ಮಲಗಬಹುದಿತ್ತು , ಛೆ ....... "
ಸ್ವರ್ಗದಂತೆ ಕಾಣುತ್ತಿದ್ದ ಲೇ ನಿಧಾನವಾಗಿ ತನ್ನ ನಿಜ ಸ್ವರೂಪ ಬಿಚ್ಚಿಡುತಿತ್ತು . ಅಲ್ಲಿ ಕಾಲ ಸ್ತಬ್ದವಾಗಿತ್ತು . ಗಜಿ- ಬಿಜಿ ಇಲ್ಲ , ಸದಾ ಮಾತನಾಡುವ ಜನರಿಲ್ಲ , ಎಲ್ಲವೂ ನಿರ್ಜೀವ , ಕೊರಡುಗಟ್ಟಿ ಹೋಗಿದೆ ಹಿಮದಂತೆ . ಅದಾಗಲೇ ಎರಡು ದಿನ ಕಳೆದಿತ್ತು , ಹೋಟೆಲಿನ ರೂಮು ಅಸಹನೀಯವಾಗುತ್ತಿತ್ತು .
" ಆದಿ ನಿಮ್ಮೂರು ತೋರುಸ್ತಿರಾ ? , ಈ ರೂಮು ಸಾಕು ಅನಿಸ್ತಾ ಇದೆ ".
ಇಬ್ಬರೂ ಹೊರಟರು .... ಅನು ಮಂಗಳೂರಿನಿಂದ ತಂದಿದ್ದ ಯಾವ ಜಾಕೆಟ್ ಗಳೂ ಅಲ್ಲಿನ ಚಳಿಗೆ ಲೆಕ್ಕವೇ ಇಲ್ಲ . ಆದಿಯೇ ಅವರ ಮನೆಯಿಂದ ಬಟ್ಟೆಗಳನ್ನು ತಂದಿದ್ದ .
ಹೊರಟು ಅದಾಗಲೇ ಹತ್ತು ನಿಮಿಷವಾಗಿತ್ತು , ಅನುಗೆ ಸುಸ್ತಾಗತೊಡಗಿತ್ತು . ಒಂದು ಹೆಜ್ಜೆಯೂ ಎತ್ತಿಡಲಾರದ ಸ್ಥಿತಿ . ಮೂರ್ಛೆ ಹೋದಂತ ಅನುಭವ . ಅನು ಕುಸಿದು ಬಿದ್ದಳು  . ಆ ಹಿಮದ ನಾಡಿನಲ್ಲಿ ವಾಹನವಾದರೂ ಎಲ್ಲಿ ಸಿಕ್ಕಿತೂ ? . ಆದಿಯೇ ಅವಳನ್ನು ಹೊತ್ತು ಬರಬೇಕಾಯಿತು .
" ನೀವಿನ್ನೂ ಆಕ್ಸ್ಲಾಮೇಟ್ ಆಗಿಲ್ಲ ಅನು ". ಅವಳ ಕಾಲು ಉಜ್ಜುತ್ತಾ ಆದಿ ಮಾತನಾಡುತ್ತಿದ್ದ  . ಇದೆಂತಹ ಊರು , ಸ್ವಲ್ಪ ಅಡ್ಡಾಡಿದರೆ ಜೀವಕ್ಕೆ ಅಪಾಯ ಬರುವ ಊರು .  ತಾನು ಮತ್ತೆ ವಿಶುವನ್ನು ನೋಡುತ್ತೆನಾ ಎನಿಸುತಿತ್ತು ಅನುಳಿಗೆ .
ಒಂದು ವಾರದ ನಂತರ ಎಲ್ಲವೂ ಅಭ್ಯಾಸ ಆಗತೊಡಗಿತ್ತು . ಒಂದೆರಡು ವಾಕ್ ಹೋದ ಮೇಲೆ , ಅವಳಿಗೆ ಕಾನ್ಫಿಡೆನ್ಸ್  ಬಂದಿತ್ತು  . ಮತ್ತೆ ಊರು ಸುತ್ತುವ ತಲುಬು ಬಂದಿತ್ತು . ಹಿಮಾಲಯವೇರಿ ಹೊರಟರು , ಕನಸುಗಳ ಹುಡುಕುತ್ತಾ . ಒಂದು ಅರ್ಧ ಬಿಟ್ಟ ಕನಸನ್ನು ಮರೆತು , ಇನ್ನೊಂದು ಕನಸ ಹುಡುಕಿ ಹೊರಟಿತ್ತು ಅವಳ ಯಾತ್ರೆ .
ಮತ್ತೆ ಅವಳಿಗೆ ಲೇ ಇಷ್ಟವಾಗಿದ್ದು ಊರು ಸುತ್ತುವಾಗಲೇ . ಇಲ್ಲಿ ಯಾರೂ ನನಗೆ ಅಡ್ಡಿಯಲ್ಲ . ಕೆಂಪು ಕಣ್ಣಿನ ಅಪ್ಪನ ಕರಿ ನೆರಳು ನನ್ನ ಹಿಂದೆ ಇಲ್ಲ . ಅನು ಮೊದಲ ಸ್ವಾತಂತ್ರ್ಯದ ಸವಿ ಸವಿಯುತ್ತಿದ್ದಳು .
"ಇದು ಹಿಮಾಲಯದ ಗುಹೆಗಳು , ಇಲ್ಲಿ ಸಾಧು ಸಂತರು ಇನ್ನೂ ಬದುಕಿದ್ದಾರೆ ಎಂದು ನಂಬಿಕೆ ಇದೆ ". ಎಂದು ಆದಿ ಅವಳಿಗೆ ತನ್ನ ಊರಿನ ಪರಿಚಯ ಮಾಡಿಸುತ್ತಿದ್ದ .
ಬೌಧ್ಧ ದೇವಾಲಯಗಳು ಸಾಲು ಸಾಲಾಗಿ ನಿಂತಿದ್ದವು . ಸದಾ ಮಂತ್ರ ಪಟನೆ ಮಾಡುವ ಬೌಧ್ಧ ಬಿಕ್ಷುಗಳು . ಆದಿ ಅವಳಿಗೆ Buddhisht prayer wheel ಕೊಡಿಸಿದ . ಅದರ ಮೇಲೆಲ್ಲಾ ಮಂತ್ರಗಳು ಇರುತ್ತವೆ , ಒಮ್ಮೆ ಅದನ್ನು ತಿರುಗಿಸದರೆ ಮಂತ್ರ ಪಟನೆ ಮಾಡಿದಷ್ಟು ಪುಣ್ಯ ಸಿಗುತ್ತದೆ ಎಂಬುದು ಅವರ ನಂಬಿಕೆ , ಆದಿ ಒಂದೇ ಸಮನೆ ಮಾತನಾಡುತ್ತಿದ್ದ .
ಅವರು ಈಗ ಲೇ ಊರಿನ ತುತ್ತತುದಿಯಲ್ಲಿ ನಿಂತಿದ್ದರು . ಸಮುದ್ರ ಮಟ್ಟದಿಂದ ಆರು ಸಾವಿರ ಅಡಿಗಳ ಎತ್ತರದಲ್ಲಿ . ಇಡೀ ವಿಶ್ವವನ್ನೇ ಗೆದ್ದ ಖುಷಿಯಲ್ಲಿ ಅನು ಇದ್ದಳು . ದಕ್ಷಿಣಕ್ಕೆ ಮುಖ ಮಾಡಿ ನಿತ್ತರೆ ಭಾರತ ಮಾತೆಯ ವಿಶ್ವರೂಪ ದರ್ಶನ .
ಇದ್ದಕ್ಕಿದಂತೆ ನಿಂತ ನೆಲ ಕುಸಿದಂತೆ ಭಾಸವಾಗುತಿತ್ತು . ಅನು ಆಯ ತಪ್ಪಿ ಪ್ರಪಾತಕ್ಕೆ ಬಿದ್ದೇ ಬಿಡುತ್ತಿದಳು . ಕ್ಷಣದಲ್ಲೇ ಆದಿ ಅವಳನ್ನು  ಸುಲಭವಾಗಿ ಎತ್ತಿ ನಿಲಿಸಿದ್ದ .
" ಏನ್ ಅನು ನೀನು , ಇದು ಹುಡುಗಾಟ ಅಲ್ಲ .   ಇದು ಮಂಗಳೂರು ಅಲ್ಲ , ಇಲ್ಲಿ ಹೆಜ್ಜೆಗೂ ಅಪಾಯ ಕಾದಿರುತ್ತೆ " . ಅವನ ಮಾತುಗಳಲ್ಲಿ ಕೋಪವಿತ್ತು , ಕಾಳಜಿಯಿತ್ತು . ಪ್ರೀತಿ ಇತ್ತಾ ?
ಮೊದಲ ಬಾರಿಗೆ ಆದಿ ಅವರ ಮನೆಗೆ ಕರೆದು ಕೊಂಡು ಹೋಗಿದ್ದ . ಬಹಳ ಚಿಕ್ಕ ಮನೆ . ಒಂದು ತಂಗಿ , ಅಮ್ಮ , ಅಪ್ಪ ಹೋಗಿ ಎಷ್ಟೋ ವರ್ಷ ಆಗಿದೆಯಂತೆ . ಎಷ್ಟು ಚೆಂದವಿತ್ತು ಅವರ ಸಂಸಾರ .
ಮತ್ತೆ ರಾತ್ರಿ ಆಗಿತ್ತು ಎಂದಿನಂತೆ , ಆದಿಯ ಅಮ್ಮನೇ ರೋಟಿ ಬಡಿಸಿದರು .
ಒಮ್ಮೊಮ್ಮೆ ಕಾಲ ಏನೆಲ್ಲಾ ಮಾಡುತ್ತ ಹೋಗುತ್ತದೆ , ಲೇ ಎಲ್ಲಿ , ಮಂಗಳೂರು ಎಲ್ಲಿ . ಈತ ಭವಿಷ್ಯ ಅರಸಿ ಅಷ್ಟು ದೂರ ತನ್ನವರನ್ನು ಬಿಟ್ಟು ಬರಬೇಕು , ಎಂತಹ ವಿಧಿ ಎಂದು ಅನು ಕಾಲಕ್ಕೆ ಶಾಪ ಹಾಕುತ್ತಿದ್ದಳು .
ಹೋಟೆಲ್ ಬಂದೇ ಬಿಟ್ಟಿತ್ತು ..............
" ನಾನು ನಾಳೆ ಹೊರಡುತ್ತೇನೆ , thank you ಆದಿ , ನೀನಿಲ್ಲದೆ ನಾನು ಇಲ್ಲಿ ಒಂಟಿ ಆಗಿ ಬಿಡುತ್ತಿದ್ದೆ . Thank you very much ".
ಆದಿ ಅವಳನ್ನು ತಬ್ಬಿ ಗಾಳಿಗೇನೋ ಎನ್ನುವಂತೆ ಮುತ್ತಿಟ್ಟ . ಕಣ್ಣ ತುದಿಯಲ್ಲಿ ನೀರು . ಅನು ಒಬ್ಬಳೇ ಅಳತೊಡಗಿದಳು
ಕುವೆಂಪು ನಗರದ ರೂಮಿನಲ್ಲಿ ಅರ್ಧಕ್ಕೇ ಉಳಿದು ಹೋದ ಕನಸೊಂದು ಕನಲಿತ್ತು
 ' ಅನು ..................................................' ಎಂದು .

(ಮುಂದುವರೆಯುವುದು ............)